ಜನವರಿ 9ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಪ್ರವಾಸ: ಎ.ಕೆ.ಅನ್ಸಾಫ್
ಮಂಗಳೂರು: ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಜನವರಿ 9ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಕಾರ್ಯಕ್ರಮದ ವಿವರಗಳು:
ಶುಕ್ರವಾರ ಬೆಳಗ್ಗೆ 9.05 ಗಂಟೆಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, 10 ಗಂಟೆಗೆ ಮಂಗಳೂರಿನ ಕದ್ರಿ ಉದ್ಯಾನವನದ ಹತ್ತಿರ ಹೊಸದಾಗಿ ನಿರ್ಮಾಣವಾಗಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ ಕಛೇರಿ ಮತ್ತು ಇತರೆ ಇಲಾಖಾ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಡಲ ತೀರ ವಲಯ ನಿರ್ವಹಣ ಸಮಿತಿ ಸದಸ್ಯ ಎ.ಕೆ.ಅನ್ಸಾಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10.30ಕ್ಕೆ ಮಂಗಳೂರಿನ ಲಾಲ್ ಭಾಗ್ನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ವಸತಿ ಗೃಹ ನಿರ್ಮಾಣಕ್ಕಾಗಿ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅನಂತರ 11 ಗಂಟೆಗೆ ಪಿಲಿಕುಳದಲ್ಲಿ 12ನೇ "ಕರ್ನಾಟಕ ಹಕ್ಕಿ ಹಬ್ಬ' ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 1 ಗಂಟೆಗೆ ಕೊಟ್ಟಾರ ಬಳಿಯ ಅಬ್ಬಕ್ಕನಗರ 1ನೇ ಮುಖ್ಯರಸ್ತೆಯ ಕರ್ನಾಟಕ ಗೋಡಂಬಿ (ಗೇರು) ಅಭಿವೃದ್ಧಿ ನಿಗಮ ಭೇಟಿ ಮತ್ತು ಸಭೆ ನಡೆಸಲಿದ್ದು, 3 ಗಂಟೆಗೆ ಮಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಮಂಗಳೂರು ಜಿಲ್ಲೆಯ ಅರಣ್ಯ ಮತ್ತು ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಾಮರ್ಶನಾ ಸಭೆ ನಡೆಸಿ, ಅನಂತರ ಸಂಜೆ 6.30ಕ್ಕೆ ಗುರುಪುರ ಮಠಕ್ಕೆ ಭೇಟಿ ನೀಡಿ, ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಎ ಕೆ ಅನ್ಸಾಫ್ ಹೇಳಿದ್ದಾರೆ.