ಕೈಬೀಸಿ ಕರೆಯುತ್ತಿದೆ ವೈಭವದ 'ಉಡುಪಿ - ಉಚ್ಚಿಲ ದಸರಾ'; ನಡೆಯುತ್ತಿದೆ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಅಬ್ಬರ
ಫೋಟೋ: ಸಚಿನ್ ಉಚ್ಚಿಲ
ಉಚ್ಚಿಲ: ಕರಾವಳಿಯಲ್ಲಿ ಈಗ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ್ದೇ ಸುದ್ದಿ. ಇಲ್ಲಿ ನಡೆಯುತ್ತಿರುವ 4ನೇ ವರ್ಷದ 'ಉಡುಪಿ ಉಚ್ಚಿಲ ದಸರಾ' ವೈಭವವನ್ನು ನೋಡಲು ಜನರ ದಂಡೇ ಹರಿದು ಬರುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಇರುವುದರಿಂದ ಇಲ್ಲಿ ನಡೆಯುತ್ತಿರುವ ವೈಭವಪೂರಿತ ದಸರಾ ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಇಲ್ಲಿನ ಸೊಬಗು, ದಿನನಿತ್ಯ ನಡೆಯುತ್ತಿರುವ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳ ಅಬ್ಬರ ಜೋರಾಗಿದೆ.
ದೇವಸ್ಥಾನದಲ್ಲಿ ಶ್ರೀ ಶಾರದೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ದಿಧಾತ್ರಿ ದೇವಿಯರನ್ನು ಪ್ರತಿಷ್ಠಾಪಿಸಲಾಗಿದ್ದು, ಭಕ್ತಾಧಿಗಳ ಗಮನ ಸೆಳೆಯುತ್ತಿದೆ.
ನಾಡೋಜ ಜಿ.ಶಂಕರ್ ಅವರ ಮಾರ್ಗದರ್ಶನದಲ್ಲಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ ಬೆಳ್ಳಂಪಳ್ಳಿ ನೇತೃತ್ವದಲ್ಲಿ ಸೋಮವಾರ ಆರಂಭವಾಗಿರುವ ದಸರಾ ಕರಾವಳಿಯ ನಾಡಹಬ್ಬದಂತೆ ಕಂಗೊಳಿಸುತ್ತಿದೆ.
ಒಂದೆಡೆ ವಸ್ತು ಪ್ರದರ್ಶನ ಜನರ ಆಕರ್ಷಣೆಯ ಕೇಂದ್ರವಾದರೆ, ಇನ್ನೊಂದೆಡೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಭವ್ಯ ಸಭಾಂಗಣದಲ್ಲಿ ನಡೆಯುತ್ತಿರುವ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಸೆಳೆಯುತ್ತಿದೆ.
ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್ ಸಭಾಂಗಣದಲ್ಲಿ ಬೆಳಗ್ಗೆ ಭಜನಾ ಸಂಕೀರ್ತನೆ, ಅಂಬಲಪಾಡಿಯ ಅಮ್ಮ ಡ್ರಿಮ್ಸ್ ಮೆಲೋಡಿಸ್'ನಿಂದ 'ಭಕ್ತಿ ಗೀತಾಂಜಲಿ' ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಬಳಿಕ ಅನ್ನಪೂರ್ಣ ರಿತೇಶ್ ನಿರ್ದೇಶನದ "ಶಿವಪ್ರಣಾಮ್" ತಂಡದಿಂದ ನೃತ್ಯ ವೈವಿಧ್ಯ, ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ 'ಕೊಲ್ಲೂರು ಮಹಾತ್ಮ' ನೃತ್ಯರೂಪಕ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು.



























