ಧರ್ಮಸ್ಥಳ ಪ್ರಕರಣ; ಬಿಜೆಪಿಯವರು ಎಸ್‌ಐಟಿ ತನಿಖೆಗೆ ತೊಂದರೆ ಮಾಡಬೇಕು ಅಂತ ಇದ್ದಾರಾ? ಬಿಜೆಪಿಯವರ ಉದ್ದೇಶ ಏನು ಅಂತ ಅವರು ಮೊದಲು ಸ್ಪಷ್ಟಪಡಿಸಲಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣ ಬಗ್ಗೆ ಎಸ್‌ಐಟಿ (SIT) ತನಿಖೆ ನಡೆಯುತ್ತಿದ್ದು, ಎನ್‌ಐಎ (NIA) ತನಿಖೆಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪುನರುಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಪರಮೇಶ್ವರ್, ಎನ್‌ಐಎ ತನಿಖೆಗೆ ಪ್ರಕರಣ ಕೊಡೋದಿಲ್ಲ, ಅದರ ಅಗತ್ಯವೂ ಇಲ್ಲ. ಎಸ್‌ಐಟಿ ತನಿಖೆ ಮುಗಿದು ವರದಿ ಬರೋವರೆಗೂ ಬೇರೆ ಯಾವುದೇ ತನಿಖೆ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಎಸ್‌ಐಟಿ ತನಿಖೆಯಲ್ಲಿ ತಪ್ಪೇನಾದ್ರೂ ಆಗಿದೆಯಾ? ತಪ್ಪಾಗಿದ್ರೆ ಬೇರೆ ಏಜೆನ್ಸಿಗೆ ಪ್ರಕರಣ ಕೊಡಬಹುದು. ಆದರೆ ಎಸ್‌ಐಟಿ ತನಿಖೆಯಲ್ಲಿ ತಪ್ಪೇನೂ ಆಗಿಲ್ಲ, ತನಿಖೆ ಚೆನ್ನಾಗಿಯೇ ನಡೀತಿದೆ. ಬಿಜೆಪಿಯವರು ಎಸ್‌ಐಟಿ ತನಿಖೆಗೆ ತೊಂದರೆ ಮಾಡಬೇಕು ಅಂತ ಇದ್ದಾರಾ? ಬಿಜೆಪಿಯವರ ಉದ್ದೇಶ ಏನು ಅಂತ ಅವರು ಮೊದಲು ಸ್ಪಷ್ಟಪಡಿಸಲಿ ಎಂದು ವಾಗ್ದಾಳಿ ನಡೆಸಿದರು. 

ಇನ್ನು, ಎನ್‌ಜಿಒಗಳಿಗೆ ವಿದೇಶಿ ಹಣ ಬಂದಿರುವ ಆರೋಪ ವಿಚಾರದಲ್ಲಿ ಇಡಿ ಎಂಟ್ರಿಯಾಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆ ಕೊಟ್ಟಿದ್ದು, ಇ.ಡಿಯವರು ತನಿಖೆ ಮಾಡೋದಾದ್ರೆ ಮಾಡಿಕೊಳ್ಳಲಿ. ಇಡಿ ತನಿಖೆಗೆ ನಾವು ಬೇಡ ಅನ್ನಲ್ಲ. ಇಡಿಯವರು ಎಂಟ್ರಿಯಾಗಿದ್ದರೆ ಅದು ಹಣಕಾಸು ವಿಚಾರಕ್ಕೆ ಇರುತ್ತದೆ. ಅವರ ತನಿಖೆಗೂ ನಮ್ಮ ತನಿಖೆಗೂ ಸಂಬಂಧ ಇಲ್ಲ ಎಂದರು. 

ಎಸ್‌ಐಟಿಗೆ ಮಂಡ್ಯದ ಮಹಿಳೆ ದೂರು ವಿಚಾರ ಬಗ್ಗೆ ಮಾತನಾಡಿ, ಅದೆಲ್ಲ ಎಸ್‌ಐಟಿ ನೋಡಿಕೊಳ್ಳುತ್ತಾರೆ ಎಂದರು. ಪ್ರಣವ್ ಮೊಹಾಂತಿ ಭೇಟಿ ವಿಚಾರ ಬಗ್ಗೆ ಮಾತಾಡಿ, ಮೊಹಾಂತಿಯವರು ಬೇರೆ ವಿಚಾರಕ್ಕೆ ಬಂದಿದ್ದರು. ಅವರು ಧರ್ಮಸ್ಥಳ ವಿಚಾರಕ್ಕೆ ಮಾತ್ರ ಬರ್ತಾರಾ? ಬೇರೆ ವಿಚಾರಕ್ಕೆ ಬಂದು ಭೇಟಿ ಆಗಿದ್ದರು ಎಂದು ಸ್ಪಷ್ಟನೆ ನೀಡಿದರು.