ಅರ್ಧದಲ್ಲೇ ರದ್ದಾಗಿದ್ದ ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್ ಕ್ರಿಕೆಟ್ ಟ್ರೋಫಿ; ಅದೃಷ್ಟದ ಆಯ್ಕೆಯಲ್ಲಿ ಖುಷಿ ಅಮರ್  ಪಂಚಜನ್ಯ ವಿನ್ನರ್, ಜಯಕರ್ನಾಟಕ  ರನ್ನರ್‌ಅಪ್

ಅರ್ಧದಲ್ಲೇ ರದ್ದಾಗಿದ್ದ ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್ ಕ್ರಿಕೆಟ್ ಟ್ರೋಫಿ; ಅದೃಷ್ಟದ ಆಯ್ಕೆಯಲ್ಲಿ ಖುಷಿ ಅಮರ್ ಪಂಚಜನ್ಯ ವಿನ್ನರ್, ಜಯಕರ್ನಾಟಕ ರನ್ನರ್‌ಅಪ್

ಉಡುಪಿ: ಸಾಕಷ್ಟು ವಿವಾದಗಳಿಗೆ ಕಾರಣವಾಗಿ ಅರ್ಧದಲ್ಲೇ ರದ್ದಾಗಿದ್ದ ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟ್ರೋಫಿಯ ವಿಜೇತ ತಂಡಗಳನ್ನು ಸೋಮವಾರ ಅದೃಷ್ಟದ ನಾಣ್ಯ ಚಿಮ್ಮುವ ಮೂಲಕ ಆಯ್ಕೆ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಖುಷಿ ಅಮರ್ ಪಂಚಜನ್ಯ ತಂಡ ವಿನ್ನರ್ ಆಗಿ ಟ್ರೋಫಿಯನ್ನು ತನ್ನದಾಗಿಸಿಕೊಂಡರೆ, ಬೆಂಗಳೂರು ಜಯಕರ್ನಾಟಕ ತಂಡ ರನ್ನರ್‌ಅಪ್ ಪ್ರಶಸ್ತಿಗೆ ಪಾತ್ರವಾಯಿತು.

ಉಡುಪಿಯ ಮಣಿಪಾಲ ಇನ್ ಹೊಟೇಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ವಿಜೇತ ಹಾಗೂ ರನ್ನರ್‌ಅಪ್ ತಂಡಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಇಝಾನ್ ಚೈತನ್ಯ ಫೈಸ್‌ರ್ ಎಚ್.ಎಂ ಎಕ್ತಾ ಮತ್ತು ಫ್ರೆಂಡ್ಸ್ ಬೆಂಗಳೂರು ತಂಡಗಳಿಗೆ ತಲಾ ₹5 lakh ಗಳಂತೆ ಒಟ್ಟು ₹20 lakh ಬಹುಮಾನ ವಿತರಿಸಲಾಯಿತು.

ಎಚ್‌ಎಂಸಿ ಯುನೈಟೆಡ್ ವತಿಯಿಂದ ಬ್ರಹ್ಮಾವರದಲ್ಲಿ Jan 23 ರಿಂದ 3 ದಿನಗಳ ಕಾಲ ಈ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಟೆನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಬಹುಮಾನ ಮೊತ್ತ ಹೊಂದಿದ್ದ ಈ ಪಂದ್ಯಾಟದಲ್ಲಿ ಆಯ್ದ 16 ತಂಡಗಳು ಭಾಗವಹಿಸಿತ್ತು. ಬೆಂಗಳೂರು, ಮಧ್ಯಪ್ರದೇಶ, ತಮಿಳುನಾಡು, ಶ್ರೀಲಂಕಾ ಹಾಗೂ ಗಲ್ಫ್ ರಾಷ್ಟ್ರಗಳ ಆಟಗಾರರು ವಿವಿಧ ತಂಡಗಳ ಪರವಾಗಿ ಆಡಿದ್ದರು. ಚಾಂಪಿಯನ್ ತಂಡಕ್ಕೆ ₹25 lakh ಹಾಗೂ ರನ್ನರ್‌ಅಪ್ ತಂಡಕ್ಕೆ ₹15 lakh ಬಹುಮಾನ ಘೋಷಿಸಲಾಗಿತ್ತು.

ಪಂದ್ಯಾಟದ ಕೊನೆಯ ದಿನವಾದ Jan 25 ರಂದು ಜಾನ್ಸನ್ ಕುಂದಾಪುರ ಹಾಗೂ ಪಂಚಜನ್ಯ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ಅಂತಿಮ ಕ್ಷಣದಲ್ಲಿ ವಿವಾದ ಉಂಟಾಗಿ ಗೊಂದಲ ಸೃಷ್ಟಿಯಾಯಿತು. ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗಿದ್ದ ಕಾರಣ ಸಂಘಟಕರು ಪಂದ್ಯಾಟವನ್ನು ರದ್ದುಗೊಳಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆದಿದ್ದವು.

ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿ, ವಿವಾದಕ್ಕೆ ಕಾರಣವಾಗಿದ್ದ ಜಾನ್ಸನ್ ಕುಂದಾಪುರ ತಂಡವನ್ನು ಕೈಬಿಟ್ಟು, ಖುಷಿ ಅಮರ್ ಪಂಚಜನ್ಯ ತಂಡವನ್ನು ಸೆಮಿಫೈನಲ್ ಪ್ರವೇಶಿಸಿದ ತಂಡವೆಂದು ಘೋಷಿಸಲಾಯಿತು. ಸೆಮಿಫೈನಲ್‌ಗೆ ಅರ್ಹತೆ ಪಡೆದ ಜಯಕರ್ನಾಟಕ ಬೆಂಗಳೂರು, ಫ್ರೆಂಡ್ಸ್ ಬೆಂಗಳೂರು, ಇಝಾನ್ ಚೈತನ್ಯ ಫೈಸ್‌ರ್ ಎಚ್.ಎಂ ಎಕ್ತಾ ಮತ್ತು ಖುಷಿ ಅಮರ್ ಪಂಚಜನ್ಯ ತಂಡಗಳ ನಡುವೆ ಅದೃಷ್ಟದ ಆಯ್ಕೆ ನಡೆಸಲಾಯಿತು.

ಈ ಆಯ್ಕೆಯಲ್ಲಿ ಪಂಚಜನ್ಯ ಹಾಗೂ ಜಯಕರ್ನಾಟಕ ತಂಡಗಳು ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲೂ ನಾಣ್ಯ ಚಿಮ್ಮುವ ಮೂಲಕ ಪಂಚಜನ್ಯ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.

ಟೂರ್ನಿ ಆಯೋಜಕ ಶಕೀಲ್ ಹೊನ್ನಾಳ ಪಂದ್ಯಾಟದ ಸಂಪೂರ್ಣ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎಚ್‌ಎಂಸಿ ಯುನೈಟೆಡ್ ಗೌರವಾಧ್ಯಕ್ಷ ಕೆ.ಪಿ. ಇಬ್ರಾಹಿಂ ಮಟಪಾಡಿ, ಮಾಜಿ ಅಧ್ಯಕ್ಷ ಸಂಜೀವ ಕೋಟ್ಯಾನ್,  ದಿ ಯುನಿವರ್ಸಲ್ ಐಡಲ್ ಇದರ ಚೇರ್ಮಾನ್ ಶಫೀ ಅಹಮ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article