ಬಿಹಾರದ ಜೈನ ಧರ್ಮಶಾಲೆಯ ಕೊಠಡಿಯೊಂದರಲ್ಲಿ ಬೆಂಗಳೂರಿನ ನಾಲ್ವರು ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆ!

ಬಿಹಾರದ ಜೈನ ಧರ್ಮಶಾಲೆಯ ಕೊಠಡಿಯೊಂದರಲ್ಲಿ ಬೆಂಗಳೂರಿನ ನಾಲ್ವರು ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆ!

ಪಾಟ್ನಾ: ಬಿಹಾರದ ಪ್ರವಾಸಿ ತಾಣವಾದ ರಾಜಗೀರ್‌ನ ದಿಗಂಬರ ಜೈನ ಧರ್ಮಶಾಲೆಯ ಕೊಠಡಿಯೊಂದರಲ್ಲಿ ಬೆಂಗಳೂರಿನ ನಾಲ್ವರು ಪ್ರವಾಸಿಗರು ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತ ಪ್ರವಾಸಿಗರು ಬೆಂಗಳೂರು ಮೂಲದವರಾಗಿದ್ದು, ಅವರು ರಾಜಗೀರ್‌ ಗೆ ಬರುವ ಮುನ್ನ ನೇಪಾಳಕ್ಕೆ ಭೇಟಿ ನೀಡಿರುವುದಾಗಿ ಹೇಳಿದ್ದರು. ಒಬ್ಬರು ಜಿಆರ್ ನಾಗ ಪ್ರಸಾದ್ ಎಂಬುವವರು ತಮ್ಮ ಆಧಾರ್ ಕಾರ್ಡ್ ನೀಡಿದ್ದು, ಅದರಲ್ಲಿ ಬೆಂಗಳೂರಿನ ವಿಳಾಸ ಇತ್ತು ಎಂದು ಅತಿಥಿ ಗೃಹದ ಉಸ್ತುವಾರಿ ಮುಕೇಶ್ ಜೈನ್ ಅವರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿ, ಧರ್ಮಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್ ಮಾಡಿದ್ದಾರೆ.

ಧರ್ಮಶಾಲಾದ ರಿಜಿಸ್ಟರ್ ಪ್ರಕಾರ, ಬೆಂಗಳೂರಿನ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿ ನಾಲ್ವರು ಜನವರಿ 31 ರಂದು ರೂಂ ಬುಕ್ ಮಾಡಿದ್ದರು. ಇವರು ಪಾವಾಪುರಿಗೆ ಭೇಟಿ ನೀಡಲು ಇಲ್ಲಿಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಆದರೆ ಏಕಾಏಕಿ ರೂಂನಲ್ಲಿ ನಾಲ್ವರೂ ಶವವಾಗಿ ಪತ್ತೆಯಾಗಿದ್ದಾರೆ.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ಕಾರಣ ಗೊತ್ತಾಗಲಿದೆ.

ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ, ರಾಜಗೀರ್ ಪೊಲೀಸ್ ಠಾಣಾಧಿಕಾರಿ ರಮಣ್ ಕುಮಾರ್ ಅವರು ಘಟನೆಯನ್ನು ದೃಢಪಡಿಸಿದ್ದು, ಘಟನಾ ಸ್ಥಳಕ್ಕೆ ಪಾಟ್ನಾದ ಎಫ್‌ಎಸ್‌ಎಲ್ ತಂಡ ಆಗಮಿಸಿ ತನಿಖೆ ಕೈಗೊಂಡಿದೆ.

ಪ್ರಕರಣದ ಕುರಿತು ಸದ್ಯ ತನಿಖೆ ನಡೆಯುತ್ತಿದೆ. ಕೊಠಡಿಯಿಂದ ದುರ್ವಾಸನೆ ಬಂದಾಗ ಹತ್ತಿರದ ನಿವಾಸಿಗಳು ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಆಗಮಿಸಿ ಕೊಠಡಿ ತೆರೆದು ನೋಡಿದಾಗ ನಾಲ್ವರು ಮೃತಪಟ್ಟಿರುವುದು ಗೊತ್ತಾಗಿದೆ. ಎರಡು ದಿನಗಳ ಹಿಂದೆ, ಈ ಪ್ರವಾಸಿಗರು ಮಾರುಕಟ್ಟೆಯಲ್ಲಿ ತಿರುಗಾಡುತ್ತಿರುವುದನ್ನು ಇಲ್ಲಿನ ಸ್ಥಳೀಯರು ಗಮನಿಸಿದ್ದರು." ಎಂದು ರಾಜಗೀರ್ ಪೊಲೀಸ್ ಠಾಣಾಧಿಕಾರಿ ರಮಣ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆ ಶಂಕೆ

ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತರ ಮೊಬೈಲ್ ಬಳಸಿ ಅವರ ಕುಟುಂಬಸ್ಥರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ರಾಜಗೀರ್ ಡಿಎಸ್​ಪಿ ಸುನೀಲ್ ಕುಮಾರ್ ಸಿಂಗ್ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article