ಮಂಗಳೂರು: ಮನೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ನೆರವಾದ ಇನಾಯತ್ ಅಲಿ

ಮಂಗಳೂರು: ಮನೆ ಕುಸಿತದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಕಾಶಭವನದ ಕಾಪಿಗುಡ್ಡೆ ನಿವಾಸಿ ಶ್ರೀಮತಿ ಭವಾನಿ ಅವರ ನಿವಾಸಕ್ಕೆ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.


ಈ ವೇಳೆ ಭವಾನಿ ಅವರ ನೋವು, ಸಂಕಷ್ಟ ಹಾಗೂ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ ಇನಾಯತ್ ಅಲಿ ಅವರು, ಮನೆ ಕುಸಿತದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಒಂದು ಮನೆಯ ನಷ್ಟ ಎಂದರೆ ಕೇವಲ ಕಟ್ಟಡದ ನಷ್ಟವಲ್ಲ, ಅದು ಕುಟುಂಬದ ಭದ್ರತೆ, ನೆಮ್ಮದಿ ಮತ್ತು ಕನಸುಗಳಿಗೆ ಉಂಟಾಗುವ ದೊಡ್ಡ ಆಘಾತವಾಗಿದೆ ಎಂದು ಹೇಳಿದರು.

ಇದೇ ವೇಳೆ ವೈಯಕ್ತಿಕ ಧನಸಹಾಯವಾಗಿ ₹50 ಸಾವಿರ ನೀಡಿದರು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕುಟುಂಬಕ್ಕೆ ಅಗತ್ಯ ಸರ್ಕಾರಿ ನೆರವು ಮತ್ತು ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವಂತೆ ಮನವಿ ಮಾಡಿದರು.