
ಉಡುಪಿಯಲ್ಲಿ ಮೇ ದಿನಾಚರಣೆ; ಮೇ 20 ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಲು ಕರೆ
ಉಡುಪಿ: ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಕಾಯ್ದೆಗಳಾದ 2019ರ ವೇತನ ಸಂಹಿತೆ, 2020ರ ಔದ್ಯೋಗಿಕ ಸುರಕ್ಷತೆ -ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ ಹಾಗೂ ಸಾಮಾಜಿಕ ಭದ್ರತಾ ಸಂಹಿತೆಗಳನ್ನು ಕೇಂದ್ರ ಸರ್ಕಾರ ತಂದಿರುವುದು ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ದೇಶದ ದ್ರೋಹದ ನೀತಿಯಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಉಡುಪಿ ಅಜ್ಜರಕಾಡು ಹುತಾತ್ಮರ ಸ್ಮಾರಕ ಬಳಿ ನಡೆದ ಮೇ ದಿನಾಚರಣೆ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಸಂಹಿತೆಗಳ ಹೆಸರು ಕಾರ್ಮಿಕರ ರಕ್ಷಿಸುವಂತೆ ಇದ್ದರೂ ವಾಸ್ತವವಾಗಿ ಅದು ಕೇಂದ್ರ ಸರ್ಕಾರ ತನ್ನ ಕಾರ್ಪೋರೇಟ್ ಯಜಮಾನರಿಗೆ ಸೇವೆ ಸಲ್ಲಿಸಲು ಕಾರ್ಮಿಕರ ದುಡಿಮೆಯ ಲೂಟಿಯನ್ನು ಕಾನೂನುಬದ್ಧ ಗೊಳಿಸುವ ಅಂಶಗಳಿವೆ ಮಾಲಕರು ಕಾರ್ಮಿಕರ ಮೇಲೆ ನಡೆಸುವ ಶೋಷಣೆಗೆ ರಿಯಾಯಿತಿ ನೀಡಿ ಕಾರ್ಮಿಕರ ಪ್ರತಿಭಟನೆ, ಮುಷ್ಕರ,ಮನವಿ ನೀಡುವುದು ಸಂಘಟಿತ ಅಪರಾಧ ಎಂದು ಶಿಕ್ಷೆ ಕೊಡುವುದನ್ನೆ ಮೋದಿಯವರು ಶ್ರಮಯೇವ ಜಯತೆ ಎನ್ನುತ್ತಿರುವುದು ದುರದ್ರಷ್ಟಕರ ಅಲ್ಲದೇ ಇದು ಕಾರ್ಮಿಕ ವರ್ಗಕ್ಕೆ ನೀಡಲಾಗು ಮರಣದಂಡನೆಯಾಗಿದೆ ಈ ಮರಣ ದಂಡನೆಯಿಂದ ಕಾರ್ಮಿಕರನ್ನು ರಕ್ಷಿಸಲು ಮೇ -20 ಕೇಂದ್ರ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ ಜಿಲ್ಲೆಯ ಸಾರ್ವಜನಿಕರು ಬೆಂಬಲಿಸಬೇಕೆಂದು ಕರೆ ನೀಡಿದರು.
ಎಂಟು ಗಂಟೆ ದುಡಿಮೆ,ಎಂಟು ಗಂಟೆ ವಿಶ್ರಾಂತಿ,ಎಂಟು ಗಂಟೆ ಮನೋರಂಜನೆ ಎಂಬ ಐತಿಹಾಸಿಕ ಹೋರಾಟ ಮೇ ತಿಂಗಳಲ್ಲಿ ಜಗತ್ತಿನಾದ್ಯಂತ ನಡೆದಿರುವುದನ್ನು ನೆನಪಿಸಿದ ಅವರು ರಾಜ್ಯದಲ್ಲಿ ಎಂಟು ಗಂಟೆಯಿಂದ 12 ಗಂಟೆಗೆ ಹೆಚ್ಚಳ ಮಾಡಿರುವುದು ಕಾರ್ಮಿಕ ವಿರೋಧಿಯಾಗಿದೆ, ಬೆಲೆಯೇರಿಕೆ, ನೂತನ ಕಾರ್ಮಿಕ ಸಂಹಿತೆ ವಿರೋಧಿಸಿ ದೇಶದಲ್ಲಿ ಮತ್ತೊಂದು ಮೇ ಹೋರಾಟಗಳನ್ನು ಮರುಕಳಿಸಬೇಕು ಎಂದು ಅವರು ಹೇಳಿದರು.
ಸಭೆಯನ್ನುದ್ದೇಶಿಸಿ ಇಂಟಕ್ ಕಾರ್ಮಿಕ ಸಂಘಟನೆಯ ಕಿರಣ್ ಹೆಗ್ಡೆ, ಎಐಟಿಯುಸಿ ಸಂಘಟನೆಯ ಶಿವಾನಂದ, ಬ್ಯಾಂಕ್ ನೌಕರರ ಸಂಘಟನೆ(ಎಐಬಿಇಎ) ಜಿಲ್ಲಾ ಸಂಚಾಲಕರು ನಾಗೇಶ್ ನಾಯಕ್ ಮಾತನಾಡಿದರು. ರಮೇಶ್, ಉಮೇಶ್ ಕುಂದರ್, ಭಾರತಿ, ಶೇಖರ ಬಂಗೇರ, ಶಶಿಧರ ಗೊಲ್ಲ, ಸಂಜೀವ ಬಳ್ಕೂರು, ಜಯನ್ ಮಲ್ಪೆ, ನಳಿನಿ, ಸರೋಜ, ಸಯ್ಯದ್, ಮುರುಳಿ, ರಮೇಶ್, ಮೋಹನ್,ದಯಾನಂದ ಕೋಟ್ಯಾನ್,ಗಣೇಶ್ ನಾಯಕ್,ವಾಮನ ಪೂಜಾರಿ ಇದ್ದರು.
ಮೆರವಣಿಗೆಯಲ್ಲಿ ನೂರಾರು ಮಂದಿ ಹಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯಿಂದ ಹೊರಟು ಅಜ್ಜರಕಾಡು ಹುತಾತ್ಮರ ಸ್ಮಾರಕ ಬಳಿ ಬಹಿರಂಗ ಸಭೆ ನಡೆಯಿತು.
ಸಭೆಯಲ್ಲಿ ಜೆಸಿಟಿಯು ಜಿಲ್ಲಾ ಸಂಚಾಲಕ ಕವಿರಾಜ್ ಎಸ್ ಕಾಂಚನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿಮಾ ನೌಕರರ ಸಂಘ(ಎಐಐಇಎ) ಕಾರ್ಯದರ್ಶಿ ಕೆ ವಿಶ್ವನಾಥ್ ವಂದಿಸಿದರು.