
ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನ; ಬಿಜೆಪಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಮಂದಿ ಮೃತ್ಯು
ಅಹಮದಾಬಾದ್: ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಜನರು ಮೃತಪಟ್ಟಿದ್ದಾರೆ ಎಂದು ಅಹಮದಾಬಾದ್ ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಈ ಮೂಲಕ ವಿಮಾನ ಪತನದಲ್ಲಿ ಮೃತಪಟ್ಟ ಎರಡನೇ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. 2009ರ ಸೆಪ್ಟೆಂಬರ್ 2 ರಂದು ಬೆಲ್ 430 ಹೆಲಿಕಾಪ್ಟರ್ ಪತನವಾಗಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್ ರಾಜಶೇಖರ್ ರೆಡ್ಡಿ ಮೃತಪಟ್ಟಿದ್ದರು. ಗುರುವಾರ (ಜೂ.12) ಅಹಮದಾಬಾದ್ ವಿಮಾನ ನಿಲ್ದಾಣದಿಂದ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದೇ ನಿಮಿಷಕ್ಕೆ ಅಪಘತಕ್ಕೀಡಾಗಿದೆ.
ಮಾಜಿ ಸಿಎಂ ವಿಜಯ್ ರೂಪಾನಿಯವರು ತಮ್ಮ ಮಗಳನ್ನು ಭೇಟಿ ಮಾಡಲು ಇದೇ ವಿಮಾನದಲ್ಲಿ ಲಂಡನ್ಗೆ ತೆರಳುತ್ತಿದ್ದರು. ದುರಾದೃಷ್ಟವಶಾತ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ವಿಜಯ್ ರೂಪಾನಿಯವರು ಗುಜರಾತ್ನ 16ನೇ ಮುಖ್ಯಮಂತ್ರಿಯಾಗಿದ್ದರು.
ವೈದ್ಯರ ಹಾಸ್ಟೆಲ್ಗೆ ವಿಮಾನ ಡಿಕ್ಕಿ
ಅಹಮದಾಬಾದ್ ನಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಏರ್ ಇಂಡಿಯಾ ವಿಮಾನ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ. ಲಂಡನ್ ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಇಂದು ಮಧ್ಯಾಹ್ನ ಅಹಮದಾಬಾದ್ ನಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ವಿಮಾನ ನಿಲ್ದಾಣದ ಪರಿಧಿಯ ಬಳಿ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ ಎಂದು ANI ವರದಿ ಮಾಡಿದೆ.
ನಾಗರಿಕ ವಿಮಾನಯಾನ ಸಚಿವಾಲಯದಿಂದ ಸಹಾಯ ಕೇಂದ್ರ
ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದ AI171 ವಿಮಾನದ ಅಪಘಾತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಸಂಘಟಿಸಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯಾಚರಣಾ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ. ಅದಕ್ಕಾಗಿ 011-24610843, 9650391859 ದೂರವಾಣಿ ಸಂಖ್ಯೆಯನ್ನು ತೆರೆಯಲಾಗಿದೆ.
ಗೃಹ ಸಚಿವ ಅಮಿತ್ ಶಾ ಅಹಮದಾಬಾದ್ಗೆ ಭೇಟಿ
ಏರ್ ಇಂಡಿಯಾ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಹಮದಾಬಾದ್ಗೆ ಭೇಟಿ ನೀಡಲಿದ್ದಾರೆ. ಅವರು ಈಗಾಗಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಫೋನ್ನಲ್ಲಿ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದಾರೆ.