'ಮಹಿಳೆಯರು ಅಬಲೆಯರಲ್ಲ, ಸಾಧಕರು': ಪದ್ಮಶ್ರೀ ಪುರಸ್ಕೃತೆ ಡಾ. ಎಸ್.ಜಿ. ಸುಶೀಲಮ್ಮರನ್ನು ಸನ್ಮಾನಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ಮಹಿಳೆಯರಲ್ಲಿ ಸಹಜವಾಗಿರುವ ತಾಳ್ಮೆ ಮತ್ತು ಸಹನೆ ಸಮಾಜದ ಬಲವಾಗಿದೆ, ಮಹಿಳೆಯರು ಅಬಲೆಯರಲ್ಲ, ಸಾಧಕರು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪದ್ಮಶ್ರೀ ಪುರಸ್ಕೃತೆ ಡಾ. ಎಸ್.ಜಿ. ಸುಶೀಲಮ್ಮ ಅವರನ್ನು ಸನ್ಮಾನಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಮಾತನಾಡಿದರು.
“ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು” ಎಂಬುದನ್ನು ಇಂದಿರಾ ಗಾಂಧೀ ಅವರು ನಿರೂಪಿಸಿದ್ದಾರೆ. ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸಮನಾಗಿ ಸಾಧನೆ ಮಾಡುತ್ತಿದ್ದು, ಅವರು ಅಬಲೆಯರಲ್ಲ — ಸಾಧಕರು ಎಂದರು.
ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಅರಣ್ಯ ಇಲಾಖೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಅರಣ್ಯ ಇಲಾಖೆಯ ಅತ್ಯುನ್ನತ ‘ಅರಣ್ಯ ಪಡೆ ಮುಖ್ಯಸ್ಥ’ರ ಹುದ್ದೆಯನ್ನೂ ಮಹಿಳೆ ಸಮರ್ಥವಾಗಿ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದ ಸಚಿವರು, ಮನೆಯಲ್ಲೂ ತಾಯಿಯಾಗಿ, ಸೋದರಿಯಾಗಿ, ಪತಿಗೆ ಮಡದಿಯಾಗಿ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವ ಮಹಿಳೆಯರು, ಕಚೇರಿಯಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಿ ಸಂಸಾರದ ರಥವನ್ನು ಎಳೆಯುತ್ತಿದ್ದಾರೆ. ಮಹಿಳೆಯರಲ್ಲಿ ಸಹಜವಾಗಿರುವ ತಾಳ್ಮೆ ಮತ್ತು ಸಹನೆ ಸಮಾಜದ ಬಲವಾಗಿದೆ.
ತಾಯಿಯಾಗಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ, ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಮತಿ ಮೀನಾಕ್ಷಿ ನೇಗಿ, ರಾಧಾದೇವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

