ಎರಡನೇ ಹಂತದ ಸಂಪುಟ ರಚನೆಯಲ್ಲಿ ಸ್ಥಾನ ಸಿಗುವ ವಿಶ್ವಾಸವಿದೆ, ನೋಡೋಣ ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೋ ಅದಕ್ಕೆ ನಾನು ಬದ್ಧ: ಝಮೀರ್ ಅಹ್ಮದ್ ಖಾನ್

ಬೆಂಗಳೂರು: ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಮೊದಲ ಹಂತದ ಸಂಪುಟ ರಚನೆಯಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೆ. ಸಿಗಲಿಲ್ಲ, ಎರಡನೇ ಹಂತದ ಸಂಪುಟ ರಚನೆಯಲ್ಲಿ ಕೂಡ ಸಿಗುವ ವಿಶ್ವಾಸವಿದೆ, ನೋಡೋಣ ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೋ ಅದಕ್ಕೆ ನಾನು ಬದ್ಧ ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅಭಿಮಾನಿಗಳು ಪ್ರತಿಭಟಿಸುವುದು ಸಹಜ. ಆದರೆ, ತಾವು ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ನಾನು ಎಲ್ಲೂ ಬಹಿರಂಗವಾಗಿ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ. ಸಚಿವ ಸ್ಥಾನ ಸಿಗದಿದ್ದರೂ ಯಾವುದೇ ಬೇಸರವಿಲ್ಲ ಎಂದರು.

ತಮ್ಮನ್ನು ಹೈಕಮಾಂಡ್ ಆಪ್ತ ಎಂದು ಬಿಂಬಿಸುತ್ತಿರುವ ವಿಚಾರ ಬಗ್ಗೆ ಕೇಳಿದಾಗ, ನಾನು ಯಾವ ಹೈಕಮಾಂಡ್ ಗೆ ಕ್ಲೋಸ್ ಇದ್ದೀನಿ, ಪಕ್ಷದ ಜವಾಬ್ದಾರಿ ಮೇರೆಗೆ ಕೇರಳ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆಗಳಿಗೆ ಹೋಗಿ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಡಿ.ಕೆ. ಸುರೇಶ್ ಅವರನ್ನು ಭೇಟಿ ಮಾಡಿರುವ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, ತಾವು ಸುರೇಶ್ ಅವರನ್ನು ಭೇಟಿ ಮಾಡುವುದು ಹೊಸದೇನಲ್ಲ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸ್ನೇಹಪೂರ್ವಕ ಭೇಟಿ. ನಾವು ತಿಂಗಳಿಗೆ ನಾಲ್ಕು ಬಾರಿ ಭೇಟಿ ಮಾಡುತ್ತೇವೆ. ಬೆಂಗಳೂರಿನಲ್ಲಿ ನಾನು ಕ್ವಾರ್ಟರ್ಸ್‌ನಲ್ಲಿದ್ದರೆ ಅವರು ಬರುತ್ತಾರೆ, ಅವರು ತಮ್ಮ ಮನೆಯಲ್ಲಿದ್ದರೆ ನಾನು ಹೋಗಿ ಭೇಟಿ ಮಾಡುತ್ತೇನೆ, ಅದರಲ್ಲೇನೂ ವಿಶೇಷವಿಲ್ಲ ಎಂದರು.

ನಿನ್ನೆ ನಡೆದ ಸಿಎಂಲ್ ಪಿ ಮೀಟಿಂಗ್ ಗೆ ಹೋಗಿದ್ದೆ. ನಮ್ಮ ಪಕ್ಷದ ಎಲ್ಲಾ 140 ಶಾಸಕರು ಒಗ್ಗಟ್ಟಾಗಿದ್ದೇವೆ. ಪರಿಷತ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಗೆಲುವಿಗೆ 28 ಶಾಸಕರ ಮತ ಬೇಕಾಗುತ್ತದೆ. ನಮ್ಮಲ್ಲಿ ಸ್ಪಷ್ಟ ಬಹುಮತ ಇರುವುದರಿಂದ ಹೆಚ್ಚುವರಿ ಮತಗಳ ಅಗತ್ಯ ನಮಗಿಲ್ಲ. ಹೀಗಾಗಿ ಈ ಚುನಾವಣೆಗೆ ನಾವು ಜೆಡಿಎಸ್ ಶಾಸಕರನ್ನು ಸಂಪರ್ಕಿಸುತ್ತೇವೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಅವರ ಬೆಂಬಲ ನಮಗೆ ಬೇಕಾಗಿಲ್ಲ ಎಂದರು.