ಗುಜರಾತಿನಲ್ಲಿ ಮತ್ತೆ ಅರಳಿದ ಕಮಲ; 'ಕೈ' ಹಿಡಿದ ಹಿಮಾಚಲ ಪ್ರದೇಶ: ಚಮತ್ಕಾರ ತೋರದ ಆಮ್ ಆದ್ಮಿಪಕ್ಷ

ಗುಜರಾತಿನಲ್ಲಿ ಮತ್ತೆ ಅರಳಿದ ಕಮಲ; 'ಕೈ' ಹಿಡಿದ ಹಿಮಾಚಲ ಪ್ರದೇಶ: ಚಮತ್ಕಾರ ತೋರದ ಆಮ್ ಆದ್ಮಿಪಕ್ಷ



ಅಹಮದಾಬಾದ್(Headlines Kannada): ಗುಜರಾತ್ ಹಾಗು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಒಂದು ಕಡೆ ಬಿಜೆಪಿ, ಇನ್ನೊಂದು ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ.

ಗುಜರಾತಿನಲ್ಲಿ ಪ್ರಧಾನಿ ಮೋದಿ ಹಾಗು ಅವರ ಇಡೀ ಕೇಂದ್ರ ಸಂಪುಟವೇ ನಿಂತು ಚುನಾವಣೆಯನ್ನು ಎದುರಿಸಿದ್ದ ಪರಿಣಾಮ ಮತ್ತೆ ಅಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಜೊತೆಗೆ ಹಿಂದಿಗಿಂತಲೂ ಹೆಚ್ಚು ಸ್ಥಾನಗಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ದಾಖಲೆಯ ಗೆಲವು ಸಾಧಿಸಿದೆ.

1995 ರಿಂದ ಗುಜರಾತ್‌ನಲ್ಲಿ ಸತತ ಗೆಲುವು ಸಾಧಿಸುತ್ತಿರುವ ಬಿಜೆಪಿ, ಮತ್ತೆ ಸತತ ಏಳನೇ ಅವಧಿಗೆ ಅಧಿಕಾರಕ್ಕೇರುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 156ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಹಿಂದಿನ ಕಾಂಗ್ರೆಸ್ ದಾಖಲೆಯನ್ನು ಧೂಳಿಪಟ ಮಾಡಿದೆ. 1985ರಲ್ಲಿ ಮಾಧವಸಿಂಹ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್‌ನ 149 ಸ್ಥಾನಗಳನ್ನು ಗೆಲ್ಲುವ ಮೂಲಕ ಗುಜರಾತಿನಲ್ಲಿ ದಾಖಲೆ ಸೃಷ್ಟಿಸಿದ್ದರು.

ಈ ಬಾರಿ ಗುಜರಾತ್​ನಲ್ಲಿ ಬಿಜೆಪಿಗೆ ಪ್ರಬಲ ಪ್ರತಿರೋಧ ಒಡ್ಡಬಹುದು ಎಂದು ನಿರೀಕ್ಷಿಸಿದ್ದ ಆಮ್ ಆದ್ಮಿ ಪಕ್ಷ ಕೇವಲ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಪ್ರತಿಪಕ್ಷ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಪಡೆಯುವ ಮೂಲಕ ಹೀನಾಯ ಸೋಲು ಕಂಡಿದೆ.

'ಕೈ' ಹಿಡಿದ ಹಿಮಾಚಲ ಪ್ರದೇಶ 

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಸ್ಪಷ್ಟ ಬಹುಮತ ಪಡೆದು ಸರಕಾರ ರಚಿಸಲು ಮುಂದಾಗಿದೆ. ಆದರೆ ತನ್ನ ಶಾಸಕರಿಗೆ ಆಪರೇಷನ್ ಕಮಲದ ಗಾಳ ಹಾಕಬಹುದು ಎಂಬ ಕಾರಣಕ್ಕೆ ಎಲ್ಲ ಶಾಸಕರಿಗೂ ಚಂಡೀಗಢಕ್ಕೆ ತೆರಳುವಂತೆ ಹೈಕಮಾಂಡ್ ಸೂಚನೆ ನೀಡಿದೆ. 

ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅಧಿಕಾರಕ್ಕೆ ಬರಲು ಯಾವುದೇ ಪಕ್ಷಕ್ಕೆ 35 ಸದಸ್ಯ ಬಲದ ಅಗತ್ಯವಿತ್ತು. ಕಾಂಗ್ರೆಸ್ 40, ಬಿಜೆಪಿ 25 ಸ್ಥಾನಗಳನ್ನು ಪಡೆದರೆ, 3  ಮಂದಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article