
ಅರಬರ ನಾಡಿನ ಪ್ರತಿಭಾವಂತ ಕನ್ನಡ ವಿದ್ಯಾರ್ಥಿಗಳನ್ನು ಗೌರವಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ; ಮನಮಿತಾ SSLCಯಲ್ಲಿ ಪ್ರಥಮ, ಶ್ರೇಯಾ PUCಯಲ್ಲಿ ಪ್ರಥಮ
ಅಬುಧಾಬಿ: ಸಪ್ತ ಸಾಗರದಾಚೆ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ವ್ಯಾಸಾಂಗ ಮಾಡುತ್ತಿರುವ ಕನ್ನಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹೆಮ್ಮೆಯ ದುಬೈ ಕನ್ನಡ ಸಂಘದ ಪದಾಧಿಕಾರಿಗಳು ಕಳೆದ ಹಲವು ವರ್ಷಗಳಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಾ ಬಂದಿದೆ.
2022-23ನೇ ಶೆಕ್ಷಣಿಕ ವರ್ಷದಲ್ಲಿ ಹೆಚ್ಚು ಅಂಕ ಗಳಿಸಿದ ಕನ್ನಡ ವಿದ್ಯಾರ್ಥಿಗಳಿಗೆ ಮೇ 21ರಂದು ನಡೆದ ಯುಎಇ ಕನ್ನಡ ಮಕ್ಕಳ ಪ್ರತಿಭಾ ಕಾರ್ಯಕ್ರಮದಲ್ಲಿ ಪ್ರಾಯೋಜಕರಲ್ಲಿ ಒಬ್ಬರಾದ ಬೆಂಗಳೂರಿನ ಖುಷಿ ಡೆವೆಲಪರ್ಸ್ ಮಾಲಿಕರಾದ ರವಿ ಅವರ ಸಹುದ್ಯೋಗಿ ಮತ್ತು ಹೆಮ್ಮೆಯ ಕನ್ನಡ ಸಂಘದ ಸಮಿತಿ ಸದಸ್ಯರುಗಳು ಸೇರಿ ಪಾರಿತೋಷಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಯುಎಇ ಕನ್ನಡ ವಿದ್ಯಾರ್ಥಿಗಳಲ್ಲಿ 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಮೂಲದ ಮನಮಿತಾ ಸುರೇಂದ್ರ ಪೈ 97.2% ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರೆ ಬೆಂಗಳೂರು ಮೂಲದ ನಿಹಾರಿಕಾ ಹೇಮಂತ್ ಕುಮಾರ್ 96.6% ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದರೆ ಕಲ್ಬುರ್ಗಿ ಮೂಲದ ರುಚಿಕಾ ಗಿರೀಶ್ 9602% ಅಂಕಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದರು.
ಪಿಯುಸಿ ಪರೀಕ್ಷೆಯಲ್ಲಿ ಬೆಂಗಳೂರು ಮೂಲದ ಶ್ರೇಯಾ ಸತೀಶ್ 97.4% ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ ಬೆಂಗಳೂರು ಮೂಲದ ಚಿತ್ರಶ್ರೀ ವಿಜಯ್ 96.6% ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ ಬೆಂಗಳೂರು ಮೂಲದ ಸಾಯಿಶ್ರಿಯ ರಾಜಗೋಪಾಲ್ 96.2% ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದು ನೆರೆದ ಅನಿವಾಸಿ ಕನ್ನಡಿಗರ ಚಪ್ಪಾಳೆಗೆ ಬಾಜಿನರಾದರು.