![ಲೋಕಸಭೆ ಚುನಾವಣೆಗೂ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾದ ಕೇಂದ್ರ ಸರಕಾರ: ಅಧಿಸೂಚನೆ ಪ್ರಕಟ ಲೋಕಸಭೆ ಚುನಾವಣೆಗೂ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾದ ಕೇಂದ್ರ ಸರಕಾರ: ಅಧಿಸೂಚನೆ ಪ್ರಕಟ](https://blogger.googleusercontent.com/img/b/R29vZ2xl/AVvXsEjNG7R_WPEjY0nlMb6y8WHiXkm95AJilMgQqJW6RUFtDi6nZkzCzI_LBxBo507agR4WTOOwGcIl8-mKeeefceVRyz7YCeIohr4wNpFMaszZW3wjjIb7dNi7flubIQ4fVnJL0nG3TswwSEfHBTTFd3TN-Xw3ZrY11NFFkN78yqEEVkjmhxk6W8E_C3pnVGxd/w640-h360/caa.jpg)
ಲೋಕಸಭೆ ಚುನಾವಣೆಗೂ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾದ ಕೇಂದ್ರ ಸರಕಾರ: ಅಧಿಸೂಚನೆ ಪ್ರಕಟ
ನವದೆಹಲಿ: ನೆರೆ ರಾಷ್ಟ್ರಗಳ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಲು ಕೇಂದ್ರ ಬಿಜೆಪಿ ಸರ್ಕಾರ ಸೋಮವಾರ ಸಂಜೆ ಅಧಿಸೂಚನೆ ಹೊರಡಿಸಿದೆ.
ಸಿಎಎ ನಿಯಮಗಳ ಅಧಿಸೂಚನೆ ಹೊರಡಿಸಿದ ಬಳಿಕ ಕೇಂದ್ರದ ಮೋದಿ ಸರ್ಕಾರವು 2014ರ ಡಿ.31ರ ವರೆಗೆ ಭಾರತಕ್ಕೆ ವಲಸೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ಹಿಂದೂ, ಸಿಖ್, ಜೈನ, ಬುದ್ಧ, ಪಾರ್ಸಿ ಹಾಗೂ ಕ್ರೈಸ್ತರಿಗೆ ದೇಶದ ಪೌರತ್ವ ನೀಡಲಿದೆ.
2019ರಲ್ಲಿ ಅಂಗೀಕಾರಗೊಂಡಿದ್ದ ಈ ಕಾನೂನಿಗೆ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ. ಆದರೆ ದೇಶದಾದ್ಯಂತ ತೀವ್ರ ಪ್ರತಿಭಟನೆಗಳು ನಡೆದ ಕಾರಣ ಜಾರಿಗೆ ಅಧಿಸೂಚನೆ ಹೊರಡಿಸಿರಲಿಲ್ಲ. 100ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು.
ಅಧಿಸೂಚನೆ ಹೊರಡಿಸದಿದ್ದರಿಂದ ಕಾಯ್ದೆ ಜಾರಿಯಾಗಿರಲಿಲ್ಲ. ಸಂಸದೀಯ ಕಾರ್ಯಗಳ ಪ್ರಕಾರ, ಯಾವುದೇ ನಿಯಮಗಳಿಗೆ ರಾಷ್ಟ್ರಪತಿಗಳ ಅಂಕಿತ ಬಿದ್ದ ಆರು ತಿಂಗಳ ಒಳಗೆ ಅವುಗಳ ಜಾರಿಗೆ ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಧೀನ ಶಾಸನಗಳ ಸಮಿತಿಗಳಿಂದ ವಿಸ್ತರಣೆ ಕೋರಬೇಕು.
ಈ ಮೊದಲು 11 ವರ್ಷ ಭಾರತದಲ್ಲೇ ನೆಲೆಸಿದವರಿಗೆ ಪೌರತ್ವ ಪಡೆಯಲು ಅವಕಾಶವಿತ್ತು. ಆದರೆ ತಿದ್ದುಪಡಿ ಮೂಲಕ 11 ವರ್ಷದಿಂದ 5 ವರ್ಷಕ್ಕೆ ಇಳಿಸಲಾಗಿದ್ದು, ಮುಸ್ಲಿಮೇತರ ವ್ಯಕ್ತಿಗಳು 6 ವರ್ಷ ಕಾಲ ಅಥವಾ ಅದಕ್ಕೂ ಮೇಲ್ಪಟ್ಟು ಭಾರತದಲ್ಲೇ ವಾಸ ಮಾಡಿದ್ದರೆ ಅಂಥವರಿಗೆ ಪೌರತ್ವ ನೀಡಲಾಗುತ್ತದೆ. ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್, ಪಾರ್ಸಿಗಳಿಗೆ ಪೌರತ್ವ ನೀಡಲಾಗುತ್ತದೆ.