![ಗದಗದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಸುಪಾರಿ ಕೊಟ್ಟ ವಿನಾಯಕ್ ಸೇರಿದಂತೆ 8 ಮಂದಿ ಆರೋಪಿಗಳ ಬಂಧನ ಗದಗದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಸುಪಾರಿ ಕೊಟ್ಟ ವಿನಾಯಕ್ ಸೇರಿದಂತೆ 8 ಮಂದಿ ಆರೋಪಿಗಳ ಬಂಧನ](https://blogger.googleusercontent.com/img/b/R29vZ2xl/AVvXsEg1WRKy0-34iKsgIW3yk8uvRobTN3YZ9VV13TfpUPYta2pwS_r7bGsfBb_cpiyQMDzJiMqt1u9KPoxzMfG9h1DzNo1tj9iNERCYn5Znqk5pr6ZUqSoBy_XySA9sYo0JBzwwigsv3EsNWjZ4jkujqDKCQGMrCu5Jun9-XLF8RuGH3cT5VHxE8BYfxsyDxa6M/w466-h640/mur.jpg)
ಗದಗದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಸುಪಾರಿ ಕೊಟ್ಟ ವಿನಾಯಕ್ ಸೇರಿದಂತೆ 8 ಮಂದಿ ಆರೋಪಿಗಳ ಬಂಧನ
ಗದಗ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗದಗ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ 8 ಮಂದಿ ಆರೋಪಿಗಳನ್ನು 48 ಗಂಟೆಗಳ ಒಳಗಾಗಿ ಬಂಧಿಸಿದ್ದೇವೆ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಗದಗ ಎಸ್ಪಿ ಬಿಎಸ್ ನೇಮಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸುಪಾರಿ ಕೊಟ್ಟಿದ್ದ ಪ್ರಮುಖ ಆರೋಪಿ ವಿನಾಯಕ್ ಸೇರಿದಂತೆ 8 ಮಂದಿ ಆರೋಪಿಗಳನ್ನುಬಂಧಿಸಲಾಗಿದೆ.
ಘಟನೆ ಸಂಬಂಧ ಪ್ರಮುಖ ಆರೋಪಿ ವಿನಾಯಕ್ ಬಾಕಳೆ ಹಾಗು ಫೈರೋಜ್ ಖಾಜಿ, ಜಿಶಾನ್ ಖಾಜಿ, ಮೀರಜ್ ಮೂಲದ ಸಾಹಿಲ್, ಸೋಹೆಲ್ ಖಾಜಿ, ಸುಲ್ತಾನ್ ಶೇಖ್, ಮಹೇಶ್ ಸಾಳೋಂಕೆ, ವಾಹಿದ್ ಬೇಪಾರಿಯನ್ನು ಬಂಧಿಸಲಾಗಿದೆ.
65 ಲಕ್ಷ ಸುಪಾರಿ ಕೊಟ್ಟು ಹತ್ಯೆ
ಪ್ರಕರಣದ ಮೊದಲ ಆರೋಪಿ ವಿನಾಯಕ್ ಬಾಕಳೆ (ಪ್ರಕಾಶ್ ಬಾಕಳೆಯ ಮೊದಲ ಪತ್ನಿಯ ಮಗ) ಮತ್ತೊಬ್ಬ ಆರೋಪಿ ಫೈರೋಜ್ಗೆ 65 ಲಕ್ಷ ರೂಪಾಯಿ ಹಣಕ್ಕೆ ಸುಪಾರಿ ಡೀಲ್ ಕೊಟ್ಟಿದ್ದ. ಮುಂಗಡವಾಗಿ 2 ಲಕ್ಷ ರೂಪಾಯಿ ಕೊಟ್ಟಿದ್ದ ವಿನಾಯಕ್ ಬಾಕಳೆ ತಂದೆ ಪ್ರಕಾಶ್ ಬಾಕಳೆ, ಅವರ ಪತ್ನಿ ಸುನಂದಾ ಹಾಗೂ ಪುತ್ರ ಕಾರ್ತಿಕ್ ಕೊಲೆಗೆ ಸಂಚು ಹೂಡಿದ್ದ. ತಂದೆ ಪ್ರಕಾಶ್ ಜೊತೆ ವ್ಯವಹಾರಿಕ ವೈಮನಸ್ಸಿನ ಕಾರಣ ಈ ಕೊಲೆಗೆ ಆತ ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ತಿ ವಿಚಾರವಾಗಿ ಕೊಲೆ
ಪ್ರಕಾಶ್ ಹಿರಿಯ ಮಗನ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದರು. ಆದರೆ, ಪ್ರಕಾಶ್ ಗಮನಕ್ಕೆ ತಾರದೇ ಮಗ ವಿನಾಯಕ್ ಕೆಲ ಆಸ್ತಿ ಮಾರಿದ್ದ. ಆತನ ವರ್ತನೆಗೆ ಬೇಸತ್ತು ಜಗಳವಾಡಿದ್ದ ಪ್ರಕಾಶ್ ಬಾಕಳೆ ಜಗಳವಾಡಿದ್ದರು. ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರಕಾಶ್, ಪತ್ನಿ ಸುನಂದಾ, ಪುತ್ರ ಕಾರ್ತಿಕ್ ಹತ್ಯೆಗೆ ಆರೋಪಿ ವಿನಾಯಕ್ ಸಂಚು ಹೂಡಿದ್ದ.
ಇತರರು ಬಚಾವ್ ಆಗಿದ್ದು ಹೀಗೆ....
ಘಟನೆ ದಿನ ಪ್ರಕಾಶ್ ಹಾಗೂ ಅವರ ಪತ್ನಿ ಸುನಂದಾ ಬೇರೆ ಕೋಣೆಯಲ್ಲಿ ಮಲಗಿದ್ದರು. ಹೀಗಾಗಿ ಅವರು ಸಾವಿನಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಮನೆಗೆ ನುಗ್ಗಿದ್ದ ಹಂತಕರು ಅವರ ಬದಲಿಗೆ ಕಾರ್ತಿಕ್ ಜೊತೆ ಇದ್ದ ಸಂಬಂಧಿಕರನ್ನು ಹತ್ಯೆ ಮಾಡಿದ್ದಾರೆ. ಪ್ರಕಾಶ್ ಹಾಗೂ ಸುನಂದಾ ಎಂದು ಭಾವಿಸಿ ಹಂತಕರು ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಜತೆಗಿದ್ದ ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಇವರನ್ನು ಹತ್ಯೆ ಮಾಡಿದ್ದರು.
ಹಂತಕರನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ರೂ.ಬಹುಮಾನ
ಕೊಲೆ ಕೇಸ್ ಭೇದಿಸಿದ್ದಕ್ಕೆ ತನಿಖೆ ನಡೆಸಿದ್ದ ಸಿಬ್ಬಂದಿಯನ್ನು ಡಿಜಿ, ಐಜಿಪಿ ಅಲೋಕ್ ಕುಮಾರ್ ಶ್ಲಾಘಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ್ದ ಸಿಬ್ಬಂದಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.