ರಾಹುಲ್ ಗಾಂಧಿಯವರ ಕೆನ್ನೆಗೆ ಹೊಡೆಯುತ್ತೇನೆ ಎಂದಿರುವ ಶಾಸಕ ಭರತ್ ಶೆಟ್ಟಿಯ ಹೇಳಿಕೆ ಅವರ ಯೋಗ್ಯತೆಗೆ ಹಿಡಿದ ಕನ್ನಡಿಯಂತಿದೆ: ಇನಾಯತ್ ಅಲಿ ಕಿಡಿ

 

ಮಂಗಳೂರು: ಶಾಸಕ ಭರತ್‌ ಶೆಟ್ಟಿ ಅವರ ಹೇಳಿಕೆಯನ್ನು ಕಾಂಗ್ರೆಸ್‌ ಪಕ್ಷವಷ್ಟೇ ಅಲ್ಲ, ಮಾನವೀಯತೆಯನ್ನು ನಂಬುವ ಮತ್ತು ಸಂವಿಧಾನವನ್ನು ಗೌರವಿಸುವ ಎಲ್ಲರೂ ವಿರೋಧಿಸುತ್ತಾರೆ. ಭರತ್‌ ಶೆಟ್ಟಿ ಅವರಂತ ಹರಕು ಬಾಯಿಯ ಸಂವಿಧಾನ ವಿರೋಧಿ ಹೇಳಿಕೆ ಒಪ್ಪುವಂತದ್ದಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ʼರಾಹುಲ್ ಗಾಂಧಿಯವರ ಕೆನ್ನೆಗೆ ಹೊಡೆಯುತ್ತೇನೆʼ ಎಂದು ಭರತ್‌ ಶೆಟ್ಟಿ ಅವರ ಹೇಳಿಕೆಯನ್ನು ರಾಜ್ಯ ಮತ್ತು ಕೇಂದ್ರ ಬಿಜೆಪಿ ಒಪ್ಪುತ್ತದೋ ಎಂದು ಸ್ಪಷ್ಟವಾಗಿ ತಿಳಿಸಬೇಕಿದೆ ಎಂದು ಇನಾಯತ್ ಅಲಿ ಒತ್ತಾಯಿಸಿದ್ದಾರೆ.

ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕನ ಸ್ಥಾನ ಸಾಂವಿಧಾನಿಕ ಹುದ್ದೆ, ಅದಕ್ಕೆ ಗೌರವ ಕೊಡ್ತೀವಿ ಅಂತಾರೆ, ಇನ್ನೊಂದು ಕಡೆ ಈ ರೀತಿ ಹರಕು ಬಾಯಿಯ ನಾಯಕರು ರಾಹುಲ್‌ ಗಾಂಧಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಲು ಪ್ರಚೋದಿಸುತ್ತಾರೆ.

ರಾಹುಲ್ ಗಾಂಧಿಯವರು "ಹಿಂದೂ ಧರ್ಮ ಭಯ ಹುಟ್ಟಿಸುವುದಿಲ್ಲ, ಅಭಯ ನೀಡುತ್ತದೆ. ಸತ್ಯವನ್ನು ಪ್ರತಿಪಾದಿಸುತ್ತದೆ. ದ್ವೇಷ ಮತ್ತು ಹಿಂಸೆಯನ್ನು ಒಪ್ಪುವುದಿಲ್ಲ ಆದರೆ ಬಿಜೆಪಿ ಮತ್ತು ಪರಿವಾರ ಅದನ್ನು ಮಾಡುತ್ತಿದೆ. ಸಮಸ್ತ ಹಿಂದೂ ಸಮಾಜವನ್ನು ಮೋದಿ ಅಥವಾ ಬಿಜೆಪಿ ಪ್ರತಿನಿಧಿಸುವುದಿಲ್ಲ" ಎಂದು ಹೇಳಿರುವುದು. ಹಿಂದೂಗಳನ್ನು ಬಹುಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವ ಶಂಕರ ಪೀಠದ ಉಜ್ಜಯಿನಿಯ ಪೂಜ್ಯ ಗುರುಗಳೂ ರಾಹುಲ್ ಗಾಂಧಿಯವರು ಹಿಂದೂ ಧರ್ಮಕ್ಕೆ ಎನೂ ಹೇಳಿಲ್ಲ. ಅದು ಬಿಜೆಪಿಗೆ ಎಂದಿದ್ದಾರೆ. ಇಷ್ಟೂ ತಿಳಿದಿದ್ದರೂ ದಡ್ಡರಂತೆ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ಮಾಡಿ ತಮ್ಮ ನಾಲಿಗೆಯ ಚಪಲ ತೀರಿಸಿಕೊಂಡಿದ್ದಾರೆ ಎಂದು ಇನಾಯತ್ ಅಲಿ ವಿವರಿಸಿದ್ದಾರೆ.

ದಯೆ ಇಲ್ಲದ ಧರ್ಮ ಯಾವುದಯ್ಯಾ? ಎಂದು ಬಸವಣ್ಣ ಹೇಳುತ್ತಾರೆ. ಯಾವುದೇ ಧರ್ಮವಾಗಲಿ ಹೊಡಿ, ಬಡಿ, ಕೊಲ್ಲು ಎಂದು ಹೇಳಿಕೊಡುವುದಿಲ್ಲ. ಮಾನವೀಯತೆಯೇ ಎಲ್ಲಾ ಧರ್ಮಗಳ ಅಡಿಪಾಯ. ಶಾಸಕ ಭರತ್‌ ಶೆಟ್ಟಿ ಅವರ ಹೇಳಿಕೆಯು ಅವರ ಯೋಗ್ಯತೆಗೆ ಹಿಡಿದ ಕನ್ನಡಿಯಂತಿದೆ. ಅವರ ಮಟ್ಟಕ್ಕೆ ಇಳಿದು ಮಾತನಾಡುವುದು ಎಂದರೆ ಕೊಚ್ಚೆಗೆ ಕಲ್ಲೆಸೆದಂತೆ. ಶಾಸಕರು ಮತ್ತು ಎಂಪಿಗಳು ತಮ್ಮ ಘನತೆ ಗೌರವ ಮರೆತು ಪಡ್ಡೆ ಹುಡುಗರಂತೆ ಮಾತನಾಡಿ ಬಿಜೆಪಿ ಮತ್ತು ಪರಿವಾರದ ಸಂಸ್ಕೃತಿ ಏನೆಂದು ಜಗತ್ತಿಗೆ ತಿಳಿಸಿದ್ದಾರೆ. ಭರತ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ಜರುಗಿಸಲು ದೂರು ನೀಡುತ್ತೇವೆ ಎಂದು ಇನಾಯತ್ ಅಲಿ ತಿಳಿಸಿದ್ದಾರೆ.