
ಭಯೋತ್ಪಾದನೆ ವಿರುದ್ಧ ಭಾರತದ ನಿಲುವು-ಕ್ರಮಗಳಿಗೆ ಬೆಂಬಲ; ಸಶಸ್ತ್ರ ಪಡೆಗಳನ್ನು ಪ್ರಶಂಸಿಸಿದ ಗ್ರ್ಯಾಂಡ್ ಮುಫ್ತಿ
Friday, May 9, 2025
ಹೊಸದಿಲ್ಲಿ: ಭಯೋತ್ಪಾದನೆ ಹಾಗೂ ತೀವ್ರವಾದದ ವಿರುದ್ಧ ಕೇಂದ್ರ ಸರಕಾರದ ನಿಲುವು ಹಾಗೂ ಕ್ರಮಗಳಿಗೆ ಭಾರತದ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕರ್ ಅಹ್ಮದ್ ಮುಸ್ಲಿಯಾರ್ ಅವರು ಶುಕ್ರವಾರ ದೃಢ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಅವರ ಎ.ಪಿ.ಅಬೂಬಕರ್ ಅಹ್ಮದ್ ಮುಸ್ಲಿಯಾರ್ ಅವರು ದೇಶದ ಸಾರ್ವಭೌಮತೆ ಹಾಗೂ ಸುರಕ್ಷತೆಯನ್ನು ಕಾಪಾಡುವಲ್ಲಿ ಸಶಸ್ತ್ರ ಪಡೆಗಳ ಪ್ರಯತ್ನಗಳನ್ನು ಹಾಗೂ ಕೇಂದ್ರ ಸರಕಾರದ ‘ತಾತ್ವಿಕ ನಿಲುವನ್ನು’ ಶ್ಲಾಘಿಸಿದರು.
ಭಯೋತ್ಪಾದನೆಯು ರಾಷ್ಟ್ರೀಯ ಸ್ಥಿರತೆ ಹಾಗೂ ಜಾಗತಿಕ ಶಾಂತಿಗೆ ತೀವ್ರ ಬೆದರಿಕೆಯಾಗಿ ಪರಿಣಮಿಸಿದೆ ಎಂದು ಹೇಳಿದ ಗ್ರ್ಯಾಂಡ್ ಮುಫ್ತಿ ಅವರು, ಉಗ್ರವಾದದ ವಿರುದ್ಧ ಭಾರತ ಕೈಗೊಂಡ ಕ್ರಿಯಾಶೀಲ ಕ್ರಮಗಳು , ಆಂತರಿಕ ಭದ್ರತೆಗೆ ಅಗತ್ಯವಾಗಿವೆ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸೌಹಾರ್ದತೆಗೆ ನಿರ್ಣಾಯಕವಾಗಿವೆಯೆಂದು ಹೇಳಿದರು.