.jpg)
ಪತ್ರಕರ್ತರಾದ ವಾಗ್ಳೆ, ನಝೀರ್ ಪೊಲ್ಯ ಸೇರಿದಂತೆ 6 ಮಂದಿ ಸಾಧಕರಿಗೆ ಗೌರವ ಪುರಸ್ಕಾರ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ನೇತೃತ್ವದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಆಶ್ರಯದಲ್ಲಿ ಜುಲೈ 1ರಂದು ಮಲಬಾರ್ ಗೋಲ್ಡ್ ಡೈಮಂಡ್'ನಲ್ಲಿ ವೈದ್ಯರ ದಿನಾಚರಣೆ, ಲೆಕ್ಕಪರಿಶೋಧಕರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದ ಹಿರಿಯ ಪತ್ರಕರ್ತರಾದ ಸುಭಾಶ್ಚಂದ್ರ ವಾಗ್ಳೆ ಹಾಗು ನಝೀರ್ ಪೊಲ್ಯ ಸೇರಿದಂತೆ ಆರು ಮಂದಿ ಸಾಧಕರು ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಹಿರಿಯ ವೈದ್ಯರಾಗಿರುವ ಡಾ.ಅಶೋಕ್ ಕುಮಾರ್ ವೈ ಜಿ. ಮತ್ತು ಸ್ತ್ರೀರೋಗ ತಜ್ಞೆ ಡಾ.ಛಾಯಾಲತಾ ಹಾಗೂ ಹಿರಿಯ ಲೆಕ್ಕಪರಿಶೋಧಕರಾದ ಪಿ. ಚಂದ್ರಮೋಹನ ಹಂದೆ ಮತ್ತು ಕೆ.ಸುರೇಂದ್ರ ನಾಯಕ್ ಆಯ್ಕೆಯಾಗಿದ್ದಾರೆ ಎಂದು ಗೌರವ ಪುರಸ್ಕಾರ ಸಮಿತಿ ಸಂಚಾಲಕ ವಿಘ್ನೇಶ್ವರ ಅಡಿಗ ತಿಳಿಸಿದ್ದಾರೆ.
ಅಂದು ಅಪರಾಹ್ನ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀಬ್ ಗದ್ಯಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಮಲಬಾರ್ ಗೋಲ್ಡ್ ವ್ಯವಸ್ಥಾಪಕ ಹಫೀಸ್ ರೆಹಮಾನ್, ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ಮತ್ತು ಅಧ್ಯಕ್ಷ ಪ್ರೊ.ಶಂಕರ್ ಭಾಗವಹಿಸುವರು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.