ಬಿಎಸ್ಎಸ್ಕೆ ಪುನಶ್ಚೇತನಕ್ಕೆ ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ; ಬೀದರ್ ಸಕ್ಕರೆ ಕಾರ್ಖಾನೆ ಅವ್ಯವಹಾರ ತನಿಖೆಗೆ ಈಶ್ವರ ಖಂಡ್ರೆ, ರಹೀಂಖಾನ್ ಒತ್ತಾಯ

ಬಿಎಸ್ಎಸ್ಕೆ ಪುನಶ್ಚೇತನಕ್ಕೆ ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ; ಬೀದರ್ ಸಕ್ಕರೆ ಕಾರ್ಖಾನೆ ಅವ್ಯವಹಾರ ತನಿಖೆಗೆ ಈಶ್ವರ ಖಂಡ್ರೆ, ರಹೀಂಖಾನ್ ಒತ್ತಾಯ

ಬೆಂಗಳೂರು, ಜೂ.26: ದುರಾಡಳಿತದ ಫಲವಾಗಿ ಕಾರ್ಮಿಕರ ವೇತನ ಹಾಗೂ ವಿವಿಧ ಬ್ಯಾಂಕ್ ಗಳ ಸುಮಾರು 430 ಕೋಟಿ ರೂ.ಗೂ ಅಧಿಕ ಬಾಕಿ ಉಳಿಸಿಕೊಂಡು ಪ್ರಸ್ತುತ ಸ್ಥಗಿತಗೊಂಡಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ 10 ವರ್ಷಗಳಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಸಚಿವರುಗಳಾದ ಈಶ್ವರ ಬಿ ಖಂಡ್ರೆ ಮತ್ತು ರಹೀಂ ಖಾನ್ ಒತ್ತಾಯಿಸಿದ್ದಾರೆ. 

ವಿಧಾನಸೌಧದ ಸಮಿತಿ ಸಭಾಂಗಣದಲ್ಲಿಂದು ನಡೆದ ಹಳ್ಳಿಖೇಡ್ ನ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವ ಮತ್ತು ಕಾರ್ಖಾನೆಯು ವಿವಿಧ ಸಹಕಾರಿ ಬ್ಯಾಂಕ್ ನಿಂದ ಪಡೆದಿರುವ ಸಾಲದ ಮರುಪಾವತಿ ಕುರಿತ ಸಭೆಯಲ್ಲಿ ಮಾತನಾಡಿದ ಈಶ್ವರ ಖಂಡ್ರೆ, ಈ ಹಿಂದೆಯೂ ಬಿಎಸ್ಎಸ್.ಕೆ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶ ಆಗಿದೆ ಆದರೆ ತಾರ್ಕಿಕ ಅಂತ್ಯ ಕಂಡಿಲ್ಲ. ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ದಂಡನೆ ಆಗಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆ ಡಿಸಿಸಿ ಬ್ಯಾಂಕ್ ನಿಂದ 115 ಕೋಟಿ ಸಾಲ ಪಡೆದಿದೆ. ಬಡ್ಡಿ ಸೇರಿ 233 ಕೋಟಿ ಬಾಕಿ ಪಾವತಿಸಬೇಕಿದೆ. ಕಾರ್ಖಾನೆ ಮತ್ತು ಡಿಸಿಸಿ ಬ್ಯಾಂಕ್ ಎರಡೂ ರೈತರದ್ದೇ ಆಗಿದೆ. ಬೆಟ್ಟದಷ್ಟು ಸಾಲದ ಹೊರೆ ಇದ್ದು ಸಕ್ಕರೆ ಕಾರ್ಖಾನೆಯೂ ಮುಚ್ಚಿದೆ. ಬ್ಯಾಂಕ್ ಕೂಡ ಚೇತರಿಸಿಕೊಳ್ಳದಂತಾಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆಯ ಪುನಶ್ಚೇತನ ಕುರಿತಂತೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಬೇಕು ಎಂದು ಸಲಹೆ ನೀಡಿದರು.

ಸಚಿವ ರಹೀಂ ಖಾನ್ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ಮಾಡಿದವರ ವಿರುದ್ಧ ಕ್ರಮ ಆಗದಿದ್ದರೆ ಮತ್ತೆ ಅವರೇ ಚುನಾಯಿಸಿ ಬಂದು ಕಾರ್ಖಾನೆಯನ್ನು ನಾಶ ಮಾಡುತ್ತಾರೆ. ಈ ಬಗ್ಗೆ ತನಿಖೆ ಆಗಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮ ಆಗಬೇಕು ಎಂದರು.

ಕಾರ್ಖಾನೆಯ ಸ್ವಾಧೀನದಲ್ಲಿರುವ 173 ಎಕರೆ ಜಮೀನಿನ ಪೈಕಿ ಕಾರ್ಖಾನೆಗೆ ಬೇಕಾದಷ್ಟು ಜಾಗ ಇಟ್ಟುಕೊಂಡು ಭಾಗಶಃ ಮಾರಾಟ ಮಾಡಿ, ಬ್ಯಾಂಕ್ ಗಳ ಸಾಲ ತೀರಿಸಿ, ಯಂತ್ರೋಪಕರಣಗಳಿಗೆ ಹೊಸ ಸಾಲ ಪಡೆದು ಕಾರ್ಖಾನೆ ಆರಂಭಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಲು ಸಹಕಾರ ಸಚಿವ ರಾಜಣ್ಣ ಸಲಹೆ ನೀಡಿದರು. 

ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಓಟಿಎಸ್ ಯೋಜನೆಯಡಿ ಬ್ಯಾಂಕ್ ಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಮತ್ತು ಖಾಸಗಿಯವರಿಗೆ ಗುತ್ತಿಗೆ ನೀಡಿ ಸಕ್ಕರೆ ಕಾರ್ಖಾನೆ ಪುನಾರಂಭ ಮಾಡುವ ಬಗ್ಗೆ ಪರಿಶೀಲಿಸುವಂತೆ ಸಲಹೆ ನೀಡಿದರು. 

ಬೀದರ್ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭಕ್ಕಾಗಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ಮತ್ತು ಕಾರ್ಖಾನೆಯ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.  

ಸಚಿವರುಗಳಾದ ಕೆ.ಎನ್. ರಾಜಣ್ಣ, ಶಿವಾನಂದ ಪಾಟೀಲ್, ಈಶ್ವರ ಬಿ ಖಂಡ್ರೆ, ರಹೀಂಖಾನ್ ಮತ್ತು ಮಾಜಿ ಸಚಿವ ರಾಜಶೇಖರ ಪಾಟೀಲ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಚಂದ್ರಶೇಖರ ಪಾಟೀಲ್, ಎಂ.ಜಿ. ಮುಳೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ್ ಬಿ ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮತ್ತಿತರರು ಪಾಲ್ಗೊಂಡಿದ್ದರು.

Ads on article

Advertise in articles 1

advertising articles 2

Advertise under the article