ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹ್ಮಾನ್‌ರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಹಿಂದೂ ಸಮುದಾಯದ ಮುಖಂಡರು

ಮಂಗಳೂರು: ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲಿನ ಅಬ್ದುಲ್ ರಹ್ಮಾನ್‌ರ ಮನೆಗೆ ಹಿಂದೂ ಸಮುದಾಯದ ಮುಖಂಡರ ನಿಯೋಗವು ರವಿವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದೆ.



ಬಡಗಬೆಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರಕಾಶ್ ಆಳ್ವ ಗುಂಡಾಲ ನೇತೃತ್ವದ ನಿಯೋಗದಲ್ಲಿದ್ದ ಮುಖಂಡರು ಹತ್ಯೆಗೀಡಾದ ರಹ್ಮಾನ್‌ರ ತಂದೆ ಅಬ್ದುಲ್ ಖಾದರ್, ಸಹೋದರ ಹನೀಫ್ ಮತ್ತಿತರರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

"ರಹ್ಮಾನ್ ತುಂಬಾ ಪಾಪದ ಹುಡುಗ. ಇಂತಹ ಘಟನೆ ಆಗಬಾರದಿತ್ತು" ಎಂದು ಸ್ಥಳೀಯ ಹಿಂದೂ ಮುಖಂಡರು ಹೇಳಿ ರಹ್ಮಾನ್ ಹತ್ಯೆ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಪ್ರಮುಖರಾದ ಬಾಬಣ್ಣ ನಡ್ಯೋಡಿ, ಮೋಹನ್ ಶೆಟ್ಟಿ ನಡ್ಯೋಡಿ, ಶಾಕೇತ್ ಭಂಡಾರಿ ಪರಕೂರು, ಕೃಷ್ಣ ಶೆಟ್ಟಿ ಗುಂಡಾಲ, ದೇವಪ್ಪ ಪೂಜಾರಿ ಬಾಳಿಕೆ ಸಹಿತ ಸುಮಾರು 25ಕ್ಕೂ ಅಧಿಕ ಮಂದಿ ಈ ನಿಯೋಗದಲ್ಲಿದ್ದರು.