RSS ನೋಂದಣಿ ಮಾಡಿಲ್ಲ, ಮಾಡೋದೂ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ ಬಿ ಎಲ್ ಸಂತೋಷ್

ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಆಯೋಜಿಸಿದ್ದ 'ಅಖಂಡ ಭಾರತ ಸಂಕಲ್ಪ ದಿನ' ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಭಾಗವಹಿಸಿದ್ದರು. ಈ ವೇಳೆ RSS ನೋಂದಣಿ ಕುರಿತು ಮಾತಾಡಿದ ಬಿ ಎಲ್ ಸಂತೋಷ್ , ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.

ತಿರಂಗ ಧ್ವಜ ಹಾಗೂ ಕೇಸರಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ದೇಶದ ಇತಿಹಾಸ ಹಾಗೂ ಆರ್‌ಎಸ್‌ಎಸ್ ಕೊಡುಗೆಗಳೇನು ದೇಶದ ಅಭಿಮಾನಿಗಳಿಗೆ ಗೊತ್ತಿದೆ. RSS ನೋಂದಣಿ ಮಾಡಿಲ್ಲ, ಮಾಡೋದೂ ಇಲ್ಲ, ರಿಜಿಸ್ಟ್ರೇಷನ್ ಮಾಡಿಸಿಕೊಂಡ ಸಂಘಟನೆಗಳು ಏನೇನ್ ಮಾಡುತ್ತಿವೆ ಎಂದು ನಮಗೆ ಗೊತ್ತಿದೆ ಎಂದರು.

ನಾನೊಬ್ಬ ಬಿಜೆಪಿ ಕಾರ್ಯಕರ್ತ, ನಾನು ಇಲ್ಲಿ ರಾಜಕೀಯ ಮಾತಾಡಲು ಬಂದಿಲ್ಲ, ಆದರೆ ಇವತ್ತು ಬೆಂಗಳೂರಿನ ಶಿವಾಜಿನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಪ್ಪತ್ತು ವರ್ಷದಿಂದ ಹಿಂದೂ ಪ್ರತಿನಿಧಿಯನ್ನು ಶಾಸಕನಾಗಿ ಮಾಡಲು ಆಗಿಲ್ಲ. ನಾನು ಚಾಲೆಂಜ್ ಮಾಡ್ತೀನಿ, ಈ ಎರಡು ಕ್ಷೇತ್ರದಲ್ಲಿ ಹಿಂದೂ ನಾಯಕನನ್ನು ಎಲೆಕ್ಷನ್​​ಗೆ ನಿಲ್ಲಿಸಿ, ಗೆಲ್ಲಿಸಿ ನೋಡೋಣ ಎಂದಿದ್ದಾರೆ.

ಸಂಘ ರೆಜಿಸ್ಟ್ರೇಷನ್ ಮಾನದಂಡ ಅಲ್ಲ, ಪ್ರಿಯಾಂಕ ಖರ್ಗೆ ಅವರೇ ಎಲ್ಲದಕ್ಕೂ ಮಾನದಂಡ ಅಲ್ಲ. ನಿಮ್ಮ ಕುಟುಂಬ, ಗುಲ್ಬರ್ಗಕ್ಕೆ ಓಡಿ ಬಂದು ಜೀವನ ಕಟ್ಕೊಂಡಿದೆ. ರಜಾಕರ ದಾಳಿಗೆ ಹೆದರಿ ಆಗ ನಿಮ್ಮಪ್ಪ ಮಲ್ಲಿಕಾರ್ಜುನ ಖರ್ಗೆ ಓಡೋಡಿ ಬಂದ್ರು. ನೀವು ನಿಮ್ಮ ಕುಟುಂಬ ಇಲ್ಲಿ ನೆಮ್ಮದಿ ವಾಸ ಮಾಡೋಕೆ ಹಿಂದೂಗಳು ಕಾರಣ. ಅವತ್ತು ನೀವು ಓಡಿ ಬಂದ ದಿನ ರಜಾಕರ ವಿರುದ್ಧ ನಿಂತಿದ್ದು ಇದೇ RSS. ಆಗ ನಿಮ್ಮ ಪೋಲಿಸರು ಬಂದಿಲ್ಲ. ನಿಮ್ಮ ರಾಜಕಾರಣಿಗಳು ಬಂದಿಲ್ಲ. ಇದೇ RSS ನ ಹುಡುಗರು ರಸ್ತೆಗಳಲ್ಲಿ ನಿಂತಿದ್ದರು. ಇದನ್ನು ನೀವೂ ನೆನಪಿಟ್ಟುಕೊಳ್ಳಬೇಕು ಎಂದು ಸಂತೋಷ್​ ಹೇಳಿದ್ದಾರೆ.