ಮಂಗಳೂರಿನ ಲಾಡ್ಜ್‌ನಲ್ಲಿ ಅವಳಿ ಹೆಣ್ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆಯೊಂದು ಮಂಗಳೂರಿನ ಕೆಎಸ್ ರಾವ್ ರಸ್ತೆಯ ಕರುಣಾ ಲಾಡ್ಜ್‌ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವವರನ್ನು ದೇವೇಂದ್ರ (48), ಅವರ ಪತ್ನಿ ನಿರ್ಮಲಾ (48) ಹಾಗೂ ಇಬ್ಬರು ಮಕ್ಕಳಾದ ಚೈತ್ರಾ (09), ಚೈತನ್ಯ (09) ಎಂದು ಗುರುತಿಸಲಾಗಿದೆ.

ದೇವೇಂದ್ರ ಹಾಗು ನಿರ್ಮಲಾ ದಂಪತಿಯ ಇಬ್ಬರು ಮಕ್ಕಳಾದ ಚೈತ್ರಾ ಹಾಗು ಚೈತನ್ಯ ಅವಳಿ ಮಕ್ಕಳಾಗಿದ್ದು, ಅನ್ಯಾಯವಾಗಿ ಇಬ್ಬರು ಮಕ್ಕಳು ಕೂಡ ಪ್ರಾಣ ಕಳೆದುಕೊಳ್ಳುವಂತಾಗಿದೆ.

ಮೂವರ ಮೃತದೇಹ ವಿಷ ಸೇವಿಸಿರುವ ರೀತಿಯಲ್ಲಿ ಹಾಗು ಒಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆತ್ಮಹತ್ಯೆ ಮಾಡಿಕೊಂಡವರೆಲ್ಲರೂ ಮೈಸೂರು ವಿಜಯನಗರ ಮೂಲದವರಾಗಿದ್ದು, ಹಣಕಾಸಿನ ಸಮಸ್ಯೆಯಿಂದಾಗಿ ತಾವು ಈ ಕೃತ್ಯವೆಸಗಿರುವುದಾಗಿ ಡೇಟ್ ನೋಟಿನಲ್ಲಿ ಬರೆದಿಟ್ಟಿದ್ದಾರೆ ಎನ್ನಲಾಗಿದೆ.

ದೇವೇಂದ್ರ ಮತ್ತು ಕುಟುಂಬ ಮಾರ್ಚ್‌ 27ರಂದು ಮಂಗಳೂರಿಗೆ ಬಂದು ಕೆಎಸ್ ರಾವ್ ರಸ್ತೆಯ ಕರುಣಾ ಲಾಡ್ಜ್‌ನಲ್ಲಿ ರೂಂ ಬುಕ್ ಮಾಡಿದ್ದರು.  ಮಂಗಳೂರಿನ ಕರುಣಾ ಲಾಡ್ಜ್‌ ಸಿಬ್ಬಂದಿ ಹೇಳುವ ಪ್ರಕಾರ ಗುರುವಾರ ಸಂಜೆ ದೇವೇಂದ್ರ ಕುಟುಂಬ ರೂಂ ಚೆಕ್ ಔಟ್‌ ಮಾಡಬೇಕಾಗಿತ್ತು, ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಬಾಗಿಲು ಓಪನ್ ಮಾಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.