![20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯೊಂದರ ಫ್ರಿಡ್ಜ್'ನಲ್ಲಿ ಮಾನವ ತಲೆಬುರುಡೆ, ಅಸ್ಥಿಪಂಜರ ಪತ್ತೆ! 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯೊಂದರ ಫ್ರಿಡ್ಜ್'ನಲ್ಲಿ ಮಾನವ ತಲೆಬುರುಡೆ, ಅಸ್ಥಿಪಂಜರ ಪತ್ತೆ!](https://blogger.googleusercontent.com/img/b/R29vZ2xl/AVvXsEgiyYq7OZbfbrlzSeYvhX3ervGe_YzGrK9hwcN2549lYiSqPhgEvEb4RYwZq-gnwf2fjXBNQSC2e2YlRPbmNKG4g-ofkNkg1mam5OfCAeD3_fV9qTb0X8tSIeg7I6nNMuRdnnmt8FZ-vMXctiYIflTQ6hrzRxY8JJHhVOThZRrbdgtEli843FZChmTUEvHX/w640-h358/kerala.jpg)
20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯೊಂದರ ಫ್ರಿಡ್ಜ್'ನಲ್ಲಿ ಮಾನವ ತಲೆಬುರುಡೆ, ಅಸ್ಥಿಪಂಜರ ಪತ್ತೆ!
ತಿರುವನಂತಪುರಂ: ಕಳೆದ 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯೊಂದರ ಫ್ರಿಡ್ಜ್ ನಲ್ಲಿ ಮಾನವ ತಲೆಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಸದ್ಯ ಚೊಟ್ಟನಿಕ್ಕಾರ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಈ ಅಸ್ತಿಯನ್ನು ಮಾನವನ ಮೂಳೆಗಳು ಎಂದು ಗುರುತಿಸಲಾಗಿದೆ. ಫೋರೆನ್ಸಿಕ್ ವಿಶ್ಲೇಷಣೆಯ ಮೂಲಕ ನಿಖರವಾದ ವಯಸ್ಸನ್ನು ಪರಿಶೀಲಿಸಬೇಕಾಗಿದೆ ಎಂದಿರುವ ಪೊಲೀಸರು ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿಯೂ ಬಳಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ವಿಧಿವಿಜ್ಞಾನ ತಂಡವು ತಲೆಬುರುಡೆ ಮತ್ತು ಅಸ್ಥಿಪಂಜರದ ಭಾಗಗಳನ್ನು ಪರೀಕ್ಷಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದೆ. ಅವುಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಿರುವ ಸಾಧ್ಯತೆ ಇದೆ. ಅಸ್ಥಿಪಂಜರ, ತಲೆಬುರುಡೆ ಮಹಿಳೆಯರದ್ದು, ಆದರೆ ಅವುಗಳು ಒಬ್ಬರದ್ದಲ್ಲ. ಅವುಗಳ ವಯಸ್ಸು ಮತ್ತು ಮೂಲವನ್ನು ಪತ್ತೆ ಹಚ್ಚುವುದು ಕಠಿಣವಾದರೂ ಈ ಬಗ್ಗೆ ಕೂಡ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಎರುವೇಲಿ ಪೂರ್ವದ ಚೊಟ್ಟಣಿಕ್ಕರ ಅರಮನೆ ಚೌಕದಲ್ಲಿರುವ 12 ಎಕರೆ ಜಾಗದಲ್ಲಿ ಪಾಳು ಬಿದ್ದ ಮನೆಯಿದೆ. ಈ ಆಸ್ತಿ ವೈದ್ಯ ಮಂಗಳಶ್ಶೇರಿ ಫಿಲಿಪ್ ಜಾನ್ ಅವರಿಗೆ ಸೇರಿದ್ದಾಗಿದೆ. ಕಳೆದ 20 ವರ್ಷಗಳಿಂದ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಆದರೂ ಮನೆಗೆ ಮೂಳೆಗಳು ಹೇಗೆ ಬಂದಿವೆ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮನೆಯ ಮಾಲೀಕರು, ವೈದ್ಯರು ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಳು ಬಿದ್ದ ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಸ್ಥಳೀಯ ಪಾಲಿಕೆ ಸದಸ್ಯೆ ಇಂದಿರಾ ಧರ್ಮರಾಜನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಮೂಳೆಗಳು ಪತ್ತೆಯಾದ ನಂತರ ಚೊಟ್ಟನಿಕ್ಕರ ಪೊಲೀಸರು ಬಿಎನ್ಎಸ್ ಕಾಯ್ದೆಯಡಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.