ತಂದೆ, ಅಜ್ಜನನ್ನು ಕೊಂದು ಚಿಕ್ಕಪ್ಪನನ್ನೂ ಕೊಲ್ಲಲು ಯತ್ನಿಸಿದ ಯುವಕ!
ಮುಂಬೈ: ಯುವಕನೊಬ್ಬ ತನ್ನ ತಂದೆ, ಅಜ್ಜನನ್ನು ಕೊಂದು ಚಿಕ್ಕಪ್ಪನ ಮೇಲೂ ಹಲ್ಲೆ ನಡೆಸಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಆ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪೊಲೀಸರ ಪ್ರಕಾರ, ಆರೋಪಿ ಚೇತನ್ ಮನೋಜ್ ಭಟ್ರೆ ಮಾದಕ ವ್ಯಸನಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.
ಮಂಗಳವಾರ ರಾತ್ರಿ ಸಂತೋಷಿಮಾತಾ ಚಾಲ್ನಲ್ಲಿರುವ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಆತನ ಕುಟುಂಬ ಸದಸ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆತನ ತಂದೆ ಮನೋಜ್ ಭಟ್ರೆ (57) ಮತ್ತು ಅಜ್ಜ ಬಾಬು ಭಟ್ರೆ (79) ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ಚಿಕ್ಕಪ್ಪ ಅನಿಲ್ ಬಾಬು ಭಟ್ರೆ (54) ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ನಾಯರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಮಾದಕ ವ್ಯಸನಿಯಾಗಿದ್ದು, ಅವನ ತಂದೆ ಮತ್ತು ಅಜ್ಜನಿಂದ ಆಗಾಗ ಕಿರುಕುಳ ಅನುಭವಿಸಿದ್ದ ಮತ್ತು ನಿಂದನೆಗೆ ಒಳಗಾಗಿದ್ದ ಎನ್ನಲಾಗಿದೆ. ನಿರಂತರ ದೌರ್ಜನ್ಯದಿಂದ ಹತಾಶೆಗೊಂಡು, ಅವನು ಕುಟುಂಬದ ಮೂವರು ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿ ಹೇಳಿದರು.