'ಉಡುಪಿ ಉಚ್ಚಿಲ ದಸರಾ-2025'; ವಿದ್ಯುತ್ ದೀಪಾಲಂಕಾರ ಉದ್ಘಾಟಿಸಿದ ಡಾ.ಜಿ. ಶಂಕರ್
ಫೋಟೋ: ಸಚಿನ್ ಉಚ್ಚಿಲ
ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೋಮವಾರದಿಂದ(ಸೆ.22) ಅ.2ರವರೆಗೆ ವೈಭವ ಪೂರಿತವಾಗಿ ನಡೆಯಲಿರುವ “ಉಡುಪಿ-ಉಚ್ಚಿಲ ದಸರಾ-2025”ರ ವಿದ್ಯುತ್ ದೀಪಾಲಂಕಾರಕ್ಕೆ ರವಿವಾರ ಸಂಜೆ ಚಾಲನೆ ನೀಡಲಾಯಿತು.
ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ನಡೆಯಲಿರುವ ಈ ಅದ್ದೂರಿಯ ಕಾರ್ಯಕ್ರಮದ ವಿದ್ಯುತ್ ದೀಪಾಲಂಕಾರವನ್ನು ದಸರಾ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ. ಶಂಕರ್ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಸೋಮವಾರ “ಉಡುಪಿ-ಉಚ್ಚಿಲ ದಸರಾ-2025”ಕ್ಕೆ ಅದ್ದೂರಿಯ ಚಾಲನೆ ದೊರಕಲಿದೆ.
ದಸರಾ ಪ್ರಯುಕ್ತ ನಗರಾಲಂಕಾರಕ್ಕಾಗಿ ವಿಶೇಷವಾಗಿ ಜೋಡಿಸಲಾಗಿರುವ ವೈವಿಧ್ಯಮಯ ವಿದ್ಯುತ್ ದೀಪಾಲಂಕಾರಕ್ಕೆ ಈ ವೇಳೆ ಚಾಲನೆ ನೀಡಲಾಯಿತು. ದೇವಸ್ಥಾನ, ದೇವಸ್ಥಾನದ ರಥಬೀದಿ, ಶಾಲಿನಿ ಜಿ.ಶಂಕರ್ ತೆರೆದ ವೇದಿಕೆ ಮತ್ತು ಶಾರದಾ ಮೂರ್ತಿಯನ್ನು ನವದುರ್ಗೆಯರು ಪ್ರತಿಷ್ಠಾಪಿಸುವ ದಸರಾ ಮಂಟಪ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಿಂದ ಪಡುಬಿದ್ರಿಯವರೆಗೆ, ಪಡುಬಿದ್ರಿಯಿಂದ ಕಾಪುವಿನ ವರೆಗೆ ಕೊಪ್ಪಲಂಗಡಿ ಯಿಂದ ಕಾಪು ಬೀಚ್ವರೆಗೆ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರವನ್ನು ಜೋಡಿಸಲಾಗಿದೆ.
ಈ ವೇಳೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಶಿಲ್ಪಾ ಜಿ.ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ ಬೆಳ್ಳಂಪಳ್ಳಿ, ಉಪಾಧ್ಯಕ್ಷರಾದ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾ ದೀಪ ಸುನೀಲ್, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ಸಾಧು ಸಾಲ್ಯಾನ್, ಶ್ರೀಪತಿ ಭಟ್, ಉಷಾ ರಾಣಿ ಮಂಗಳೂರು, ಮನೋಜ್ ಕಾಂಚನ್, ಸುಜಿತ್ ಸಾಲ್ಯಾನ್, ಸತೀಶ್ ಕಾಂಚನ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರ ಮತ್ತು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ, ದಿನೇಶ್ ಎರ್ಮಾಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

