ಕಾರಿನ​ ಮಿರರ್​​​ಗೆ ಟಚ್ ಆಗಿದ್ದಕ್ಕೆ ಹಿಂಬಾಲಿಸಿ ಬೈಕ್‌ಗೆ ಗುದ್ದಿಸಿ ಯುವಕನ ಕೊಲೆ; ದಂಪತಿ ಬಂಧನ

ಬೆಂಗಳೂರು: ಕೇವಲ ಕಾರಿನ​ ಮಿರರ್​​​ಗೆ ಬೈಕ್ ಟಚ್ ಆಗಿದ್ದಕ್ಕೆ ಕಾರಿನಲ್ಲಿದ್ದ ದಂಪತಿ ಬೈಕ್ ಸವಾರರನ್ನು ಹಿಂಬಾಲಿಸಿ ಬೈಕ್ ಗೆ ಡಿಕ್ಕಿ ಹೊಡೆದು ಸಾಯಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ​ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮ ಲೇಔಟ್‌ನಲ್ಲಿ ಅಕ್ಟೋಬರ್ 25ರಂದು ರಾತ್ರಿ ಈ ಘಟನೆ ನಡೆದಿದೆ.

ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೋಜ್, ಆರತಿ ಶರ್ಮ ಬಂಧಿತ ದಂಪತಿ. ಪುಟ್ಟೇನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಸಿನಿಮೀಯ ಸ್ಟೈಲ್‌ನಲ್ಲಿ ಕೊಲೆ ಮಾಡಿ ಗಂಡ-ಹೆಂಡತಿ ತಲೆಮರೆಸಿಕೊಂಡಿದ್ದರು. ಇಬ್ಬರನ್ನೂ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 

ಪ್ರಕರಣ ಏನು?

ಕಾರಿನ ಮಿರರ್‌ಗೆ ಹೊಡೆದು ಹೋದರು ಎಂಬ ಕಾರಣಕ್ಕೆ ಕೋಪಗೊಂಡು 2 ಕಿ.ಮೀ. ವರೆಗೆ ಹಿಂಬಾಸಿಕೊಂಡು ಹೋಗಿ ಈ ದಂಪತಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದ್ದರು. ಕಾರು ಗುದ್ದಿದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ರಸ್ತೆಯಲ್ಲಿ ಹಾರಿ ಬಿದ್ದರು. ಬೈಕ್‌ನಲ್ಲಿದ್ದ ದರ್ಶನ್‌ ಮತ್ತು ವರುಣ್‌ಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ದರ್ಶನ್‌ ಮೃತಪಟ್ಟಿದ್ದ. ಅ.25ರ ರಾತ್ರಿ ಪುಟ್ಟೇನಹಳ್ಳಿಯ ಶ್ರೀರಾಮ ಲೇಔಟ್‌ನಲ್ಲಿ ಘಟನೆ ನಡೆದಿತ್ತು.

ಮೊದಲು ಜೆಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಎಂದು ಕೇಸ್ ದಾಖಲಾಗಿತ್ತು. ತನಿಖೆ ವೇಳೆ ಕೊಲೆ ಎಂದು ಪತ್ತೆಯಾಗಿದೆ. ಘಟನೆ ಬಳಿಕ ದಂಪತಿ ಕಾರಿನಲ್ಲಿ ಎಸ್ಕೇಪ್‌ ಆಗಿದ್ದರು. ಘಟನೆಯಾದ ಕೆಲ ಸಮಯದ ನಂತರ ವಾಪಸ್‌ ಸ್ಥಳಕ್ಕೆ ದಂಪತಿ ಬಂದಿದ್ದರು. ಕಾರಿನ ಕೆಲ ಪಾರ್ಟ್ಸ್‌ಗಳು ನೆಲಕ್ಕೆ ಬಿದ್ದಿದ್ದವು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಸಾಕ್ಷಿ ನಾಶ ಮಾಡುವ ಕೆಲಸ ಮಾಡಿದ್ದರು. ಸದ್ಯ ಕೇಸ್ ದಾಖಲು ಮಾಡಿ ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.