
ಸಿಜೆಐ ಗವಾಯಿಯವರ ಮೇಲಿನ ಶೂ ಎಸೆದ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ರಾಷ್ಟ್ರಪತಿಗೆ ಮನವಿ
ದಲಿತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ: ಮಲ್ಲು ಹಲಗಿ ಆತಂಕ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಕೋರ್ಟ ಹಾಲ್ ನಲ್ಲಿ ವಕೀಲ ರಾಕೇಶ ಕಿಶೋರ್ ಎಂಬ ವ್ಯಕ್ತಿ ಶೂ ಎಸೆದ ಪ್ರಕರಣವನ್ನು ಮಾಜಿ ಐಪಿಎಸ್ ಅಧಿಕಾರಿ ಬಿಜೆಪಿ ವಕ್ತಾರ ಭಾಸ್ಕರ್ ರಾವ್ ಅವರು ಬೆಂಬಲಿಸಿರುವುದನ್ನು ಖಂಡಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂ.ಆರ್. ಎಚ್. ಎಸ್) ಸಮಿತಿಯಿಂದ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಗವಾಯಿ ಅವರಿಗೆ ಮಾತ್ರ ಅವಮಾನ ಮಾಡಿಲ್ಲ,ಡಾ.ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಈ ಸಂಬಂಧ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲರಾದ ರಾಕೇಶ್ ಕಿಶೋರ್ ಹಾಗೂ ಭಾಸ್ಕರ್ ರಾವ್ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಬಂಧಿಸಬೇಕು ಹಾಗು ಕೂಡಲೇ ಶೂ ಎಸೆದ ರಾಕೇಶ್ ಕಿಶೋರ್ ಅವರನ್ನು ಬಾರ್ ಕೌನ್ಸಿಲ್ ನಿಂದ ಶಾಶ್ವತ ಅಮಾನತ್ತು ಮಾಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಮನವಿ ಮನವಿ ಪತ್ರವನ್ನು ವಡಗೇರ ತಹಶೀಲ್ದಾರ್ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಯಾದಗಿರಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂ. ಆರ್. ಎಚ್, ಎಸ್ ) ಕಾರ್ಯದರ್ಶಿ ಮಲ್ಲು ಹಲಗಿ ಅವರು, ದಲಿತರು ಉನ್ನತ ಹುದ್ದೆಯಲ್ಲಿದ್ದರೆ ಜಾತಿ ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ. ಇನ್ನು ಕೆಲವರು ಪ್ರಚೋದನ ಹೇಳಿಕೆ ನೀಡುತ್ತಲೇ ಇದ್ದಾರೆ ಮತ್ತು ದಲಿತರ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆ ಪ್ರಕರಣಗಳು ನಡೆಯುತ್ತಿದ್ದು, ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇನ್ನುಮುಂದೆ ಇಂಥ ಘಟನೆಗಳು ಮರುಕಳಿಸಿದಂತೆ ಕೇಂದ್ರ ಸರಕಾರ ಹಾಗು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಡಗೇರಾ ತಾಲೂಕು ಯುವ ಘಟಕ ಅಧ್ಯಕ್ಷ ಹಣಮಂತ ಒಡ್ಕರ್, ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಗೋನಾಲ, ಸಿದ್ದಪ್ಪ ಬೀರನಕಲ್, ಮಹೇಶ್ ಹುಲಿ, ಹುಲಗಪ್ಪ ಹಿರಿಮೆಟಿ ಹಾಗೂ ಇತರರು ಹಾಜರಿದ್ದರು.