ಸಂಸ್ಥಾನಗಳು ಹುಟ್ಟುತ್ತವೆ–ಅಳಿಯುತ್ತವೆ, ಮನುಷ್ಯ ಹುಟ್ಟುತ್ತಾನೆ –ಸಾಯುತ್ತಾನೆ; ಈ ಅವಧಿಯಲ್ಲಿ ಮಾಡಿದ ಕಾರ್ಯ ಮಾತ್ರ ಶಾಶ್ವತ: ಈಶ್ವರ್ ಖಂಡ್ರೆ
ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಬೆಂಗಳೂರಿನ ತರಳಬಾಳು ಭವನದಲ್ಲಿ ಆಯೋಜಿಸಲಾದ ಡಾ.ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಸಭಾ ಇದರ ರಾಷ್ಟ್ರೀಯ ಉಪಾಧ್ಯಕ್ಷ ಈಶ್ವರ್ ಬಿ ಖಂಡ್ರೆಯವರು ಭಾಗವಹಿಸಿ ಗೌರವ ನಮನ ಸಲ್ಲಿಸಿದರು.
ಡಾ. ಶಾಮನೂರು ಶಿವಶಂಕರಪ್ಪ ಅವರು ಮೂರು ಅವಧಿಗೆ ಸತತ ಹದಿಮೂರೂವರೆ ವರ್ಷಗಳ ಕಾಲ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ, ಜನರಿಂದ–ಜನರಿಗಾಗಿ–ಜನರಿಗೋಸ್ಕರ ಬದುಕಿದ ಅಪರೂಪದ ನಾಯಕರು. ಅವರ ಜೀವನೋತ್ಸಾಹ, ಸಮಾಜದ ಮೇಲಿನ ಬದ್ಧತೆ ಮತ್ತು ನಿರ್ಭಯ ನಿಲುವುಗಳು ನಮಗೆಲ್ಲರಿಗೂ ಮಾದರಿ ಎಂದ ಖಂಡ್ರೆಯವರು, ಬೆಂಗಳೂರು ನಗರದಲ್ಲಿ 1000 ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ನಿರ್ಮಿಸಬೇಕು ಎಂಬುದು ಅವರ ಮಹತ್ತರ ಆಶಯವಾಗಿತ್ತು. ಈ ಕನಸನ್ನು ನನಸು ಮಾಡಲು ನಾವು ಬದ್ಧರಾಗಿದ್ದು, ಈಗಾಗಲೇ 2 ಎಕರೆ ಜಮೀನು ಖರೀದಿಸಲಾಗಿದ್ದು, ಯೋಜನೆಯ ರೂಪುರೇಷೆ ಸಿದ್ಧವಾಗಿದೆ ಎಂದರು.
“ಸಂಸ್ಥಾನಗಳು ಹುಟ್ಟುತ್ತವೆ–ಅಳಿಯುತ್ತವೆ, ಮನುಷ್ಯ ಹುಟ್ಟುತ್ತಾನೆ–ಸಾಯುತ್ತಾನೆ; ಆದರೆ ಹುಟ್ಟು–ಸಾವಿನ ನಡುವಿನ ಅವಧಿಯಲ್ಲಿ ಮಾಡಿದ ಕಾರ್ಯ ಮಾತ್ರ ಶಾಶ್ವತ” ಎಂಬಂತೆ, ಡಾ. ಶಾಮನೂರು ಶಿವಶಂಕರಪ್ಪ ಅವರು ಮಾಡಿದ ಸೇವೆ ಸದಾ ಸ್ಮರಣೀಯ ಎಂದು ಖಂಡ್ರೆಯವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದು, ಡಾ. ಶಾಮನೂರು ಶಿವಶಂಕರಪ್ಪ ಅವರ ಸಮಾಜಮುಖಿ ಜೀವನವನ್ನು ಸ್ಮರಿಸಿದರು.
