11 ತಿಂಗಳ ಪುಟ್ಟ ಕಂದಮ್ಮನನ್ನು ಕ್ರೂರವಾಗಿ ಹತ್ಯೆ! ಮಂಚದಿಂದ ಕೆಳಗೆಬಿದ್ದು ಸತ್ತಳೆಂದು ನಾಟಕವಾಡಿ ಕೊನೆಗೂ ಸಿಕ್ಕಿಬಿದ್ದ ಪೋಷಕರು!

ಬೆಂಗಳೂರು: 11 ತಿಂಗಳ ಪುಟ್ಟ ಕಂದಮ್ಮನ ಸಾವನ್ನು ಹಾಸಿಗೆಯಿಂದ ಬಿದ್ದು ಸಂಭವಿಸಿದ ಸಾವು ಎಂದು ಬಿಂಬಿಸಲು ಯತ್ನಿಸಿದ ಹೆತ್ತವರ ಕ್ರೌರ್ಯ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.

ಪೂರ್ವ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತಗಾನೂರು ಗ್ರಾಮದಲ್ಲಿ 11 ತಿಂಗಳ ಹೆಣ್ಣುಮಗುವನ್ನು ಕೊಂದು, ಅದನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ ಮಗುವಿನ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನ ತಂದೆ ಶೇಖಪ್ಪ ಆರಂಭದಲ್ಲಿ, ಹಾಲುಣಿಸುತ್ತಿದ್ದ ವೇಳೆ ಪತ್ನಿ ವಿಜಯಲಕ್ಷ್ಮಿ ನಿದ್ರೆಗೆ ಜಾರಿದ್ದು, ಮಗು ಹಾಸಿಗೆಯಿಂದ ಕೆಳಗೆ ಬಿದ್ದು ಮೃತಪಟ್ಟಿದೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಆದರೆ, ಮರಣೋತ್ತರ ಪರೀಕ್ಷೆ ವರದಿ ಹಾಗೂ ತನಿಖೆಯಲ್ಲಿ ಅವರ ಹೇಳಿಕೆಗಳಿಗೆ ವಿರುದ್ಧವಾದ ಸಾಕ್ಷ್ಯಗಳು ದೊರೆತಿದ್ದು, ಬಳಿಕ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಜೂನ್ 9ರಂದು ಈ ಘಟನೆ ನಡೆದಿತ್ತು. ಮಗು ಅಸ್ವಸ್ಥಗೊಂಡ ಬಳಿಕ ಪೂರ್ವ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ಜೂನ್ 22ರಂದು ಬಂದ ಮರಣೋತ್ತರ ಪರೀಕ್ಷೆ ವರದಿಯಲ್ಲಿ, ಮಗುವಿನ ದೇಹದೊಳಗಿನ ತೀವ್ರ ರಕ್ತಸ್ರಾವ ಮತ್ತು ಉಸಿರಾಟದ ತೊಂದರೆಯಿಂದ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಮಗುವಿನ ಮುಖ, ಎದೆ, ಕಾಲುಗಳು ಹಾಗೂ ಖಾಸಗಿ ಅಂಗಗಳ ಮೇಲೆ ಹಲವು ಗಾಯಗಳಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಗು ಬಿದ್ದಿದೆ ಎನ್ನಲಾದ ಹಾಸಿಗೆಯ ಎತ್ತರ ಕೇವಲ ಎರಡು ಅಡಿ ಮಾತ್ರವಾಗಿದ್ದು, ಅಷ್ಟು ಎತ್ತರದಿಂದ ಬಿದ್ದರೆ ಇಂತಹ ಗಂಭೀರ ಗಾಯಗಳಾಗುವುದು ಅಸಾಧ್ಯ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ಬಳಿಕ ಪೋಷಕರನ್ನು ವಿಚಾರಣೆಗೊಳಪಡಿಸಿದಾಗ ಅಸಲಿ ಸತ್ಯ ಹೊರ ಬಂದಿದೆ. ಜೂನ್ 9ರಂದು ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದ ಶೇಖಪ್ಪ ಮತ್ತು ವಿಜಯಲಕ್ಷ್ಮಿ ನಡುವೆ ಮಾತಿನ ಚಕಮಕಿ ನಡೆದಿದೆಯೆನ್ನಲಾಗಿದೆ. 

ಈ ವೇಳೆ ಮಗು ಅಳುತ್ತಿದ್ದಾಗ ವಿಜಯಲಕ್ಷ್ಮಿ ಮಗುವಿಗೆ ಕಾಲಿನಿಂದ ಒದ್ದಿದ್ದಾಳೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಶೇಖಪ್ಪ ಮಗುವನ್ನು ಎತ್ತಿ ಬಲವಾಗಿ ನೆಲಕ್ಕೆ ಎಸೆದಿದ್ದಾನೆ. ಇದರಿಂದ ಮಗುವಿನ ಒಳಾಂಗಗಳಿಗೆ ತೀವ್ರ ಗಾಯಗಳಾಗಿ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಕ್ಷಿದಾರರ ಹೇಳಿಕೆಗಳ ಪ್ರಕಾರ, ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ವಿಜಯಲಕ್ಷ್ಮಿಗೆ ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿದ್ದು, ಮಗುವಿನ ಬಗ್ಗೆ ಸಹ ಮಮತೆ ಇರಲಿಲ್ಲ ಎಂಬ ಆರೋಪಗಳೂ ತನಿಖೆ ವೇಳೆ ಕೇಳಿಬಂದಿವೆ. ಈ ಆರೋಪಗಳು ತನಿಖೆಯ ಭಾಗವಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.

ವೈದ್ಯಕೀಯ ವರದಿ, ಸಾಕ್ಷಿದಾರರ ಹೇಳಿಕೆಗಳು ಹಾಗೂ ತನಿಖೆಯಲ್ಲಿ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಅವಲಹಳ್ಳಿ ಪೊಲೀಸರು ತಂದೆ ಶೇಖಪ್ಪ ಮತ್ತು ತಾಯಿ ವಿಜಯಲಕ್ಷ್ಮಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಹಾಗೂ 3(5) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.