25 ಗಂಟೆಗಳ ನಿರಂತರ ದಾಸವಾಣಿ ಗಾಯನ; ವಿಶ್ವದಾಖಲೆ ನಿರ್ಮಿಸಿದ ಸಂಗೀತ ಬಾಲಚಂದ್ರರಿಗೆ ‘ಗೀತಾ ಗಂಗೋತ್ರಿ’ ಬಿರುದು

ಉಡುಪಿ: ಶ್ರೀಕೃಷ್ಣನ ಸನ್ನಿಧಿಯಲ್ಲಿ ಸತತ 25 ಗಂಟೆಗಳ ಕಾಲ ದಾಸರ ಕೀರ್ತನೆಗಳನ್ನು ನಿರಂತರವಾಗಿ ಹಾಡಿದ ಸಂಗೀತ ವಿದುಷಿ ಸಂಗೀತ ಬಾಲಚಂದ್ರ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಭಾನುವಾರ ಬೆಳಿಗ್ಗೆ 6.30ಕ್ಕೆ ಶ್ರೀಪುತ್ತಿಗೆ ಮಠದ ಭಗವದ್ಗೀತಾ ಮಂದಿರದ ನೃಸಿಂಹ ಸಭಾಭವನದಲ್ಲಿ ಆರಂಭವಾದ ಗಾಯನ ಸೋಮವಾರ ಬೆಳಿಗ್ಗೆ 7.40ರ ಸುಮಾರಿಗೆ ‘ಕೃಷ್ಣ ಏನ ಬಾರದೆ’ ದಾಸರ ಪದದೊಂದಿಗೆ ಮುಕ್ತಾಯವಾಯಿತು.



ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಡಾ. ಮನೀಷ್ ವಿಶ್ನೋಯಿ ಅವರು ಸಾಧನೆಯನ್ನು ಅಧಿಕೃತವಾಗಿ ಘೋಷಿಸಿ ಪ್ರಮಾಣಪತ್ರ ನೀಡಿದರು. ಬಳಿಕ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸೂಚಿಸಿದ ‘ಗೀತಾ ಗಂಗೋತ್ರಿ’ ಬಿರುದನ್ನು ಸಂಗೀತ ಬಾಲಚಂದ್ರ ಅವರಿಗೆ ಪ್ರದಾನ ಮಾಡಿದರು.

ಪಕ್ಕವಾದ್ಯ ಕಲಾವಿದರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಬಾಲಚಂದ್ರ ಅವರನ್ನು ಹಾಗೂ ಅವರ ಮಾತಾ–ಪಿತರನ್ನು ಗೌರವಿಸಲಾಯಿತು. ಭೀಮಾ ಜುವೆಲರ್ಸ್ ಪ್ರಾಯೋಜಕತ್ವದ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಸಂಗೀತಾಭಿಮಾನಿಗಳು ಹಾಗೂ ಕೃಷ್ಣಭಕ್ತರು ಸಾಕ್ಷಿಯಾದರು.