ಮೋದಿ ಮಂಗಳೂರು ಭೇಟಿಯಿಂದ ಶೇ.15ರಷ್ಟು ಬಿಜೆಪಿ ಮತಗಳಲ್ಲಿ ಹೆಚ್ಚಳ: ಕೆ. ಉದಯಕುಮಾರ್ ಶೆಟ್ಟಿ

ಉಡುಪಿ: ಈ ಚುನಾವಣೆ ವ್ಯಕ್ತಿ ಆಧರಿತ ಚುನಾವಣೆ ಅಲ್ಲ. ಬದಲಾಗಿ ಪಕ್ಷದ ಚಿಹ್ನೆಯಡಿ ನಡೆಯುವ ಚುನಾವಣೆಯಾಗಿದೆ. ದೇಶದ ಭವಿಷ್ಯ ಮತ್ತು ರಾಷ್ಟ್ರೀಯತೆಗೆ ಒತ್ತು ನೀಡಿ ನಡೆಯುವ ಚುನಾವಣೆ ಎಂದು ಬಿಜೆಪಿ ಮಂಗಳೂರು ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಮಂಗಳೂರಿಗೆ ಬಂದ ನಂತರ ಶೇ. 15ರಷ್ಟು ಬಿಜೆಪಿ ಮತಗಳಲ್ಲಿ ಹೆಚ್ಚಳ ಕಂಡುಬಂದಿದೆ. ಹೀಗಂತ ಮತದಾರರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ ನಾಯಕತ್ವವನ್ನು ಯಾರು ವಹಿಸಿಕೊಳ್ಳಬೇಕು, ಹಿಂದಿನ ಸರಕಾರಗಳು ಮತ್ತು ಈಗಿನ ಕೇಂದ್ರ ಸರಕಾರ ಮಾಡಿದ ಕೆಲಸಗಳೇನು ಎಲ್ಲವೂ ಈ ಚುನಾವಣೆಯಲ್ಲಿ ಮುಖ್ಯವಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಶತಮಾನದಷ್ಟು ಇತಿಹಾಸವಿದ್ದು ಸುಮಾರು ಆರುವತ್ತು ವರ್ಷಗಳಷ್ಟು ಕಾಲ ಒಂದೇ ಕುಟುಂಬದ ನಾಲ್ಕು ತಲೆಮಾರು ಆಡಳಿತ ನಡೆಸಿದೆ. ಈಗ ಈ ಬಾರಿ ಇನ್ನೊಂದು ಅವಕಾಶ ನೀಡಿ ಎಂದು ಕೇಳುತ್ತಿದೆ ಎಂದು ವ್ಯಂಗ್ಯ ವಾಡಿದರು.