ಎಸ್.ಎಂ ಕೃಷ್ಣ ಅಗಲಿಕೆಯ‌ ಕುರಿತು ನೋವಿನ ನುಡಿಗಳನ್ನು ಹಂಚಿಕೊಂಡ ನಟಿ ರಮ್ಯಾ!

ಎಸ್.ಎಂ ಕೃಷ್ಣ ಅಗಲಿಕೆಯ‌ ಕುರಿತು ನೋವಿನ ನುಡಿಗಳನ್ನು ಹಂಚಿಕೊಂಡ ನಟಿ ರಮ್ಯಾ!

ಮಂಡ್ಯ: ನಿನ್ನೆ ನಿಧನರಾದ ಮಾಜಿ ಸಿಎಂ ಎಸ್‌.ಎಂ‌ ಕೃಷ್ಣ ಅವರ ಅಗಲಿಕೆಯ ಕುರಿತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ನೋವಿನ ನುಡಿಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ʻʻಒಬ್ಬ Statesman ಎಲ್ಲಾ ಅರ್ಥಗಳಲ್ಲಿ ರಾಜಕಾರಣಿ ಎಂದಿಗೂ ಅಲ್ಲ. ಅವರು ಯಾರನ್ನೂ, ತಮ್ಮ ಪ್ರತಿಸ್ಪರ್ಧಿಗಳನ್ನು ಸಹ ದ್ವೇಷಿಸಿ ಮಾತನಾಡಲಿಲ್ಲ. ಭವಿಷ್ಯದ ದೃಷ್ಟಿಯುಳ್ಳವ, ದಯಾಮಯಿ ಅನುಕಂಪದಿಂದ ಕೂಡಿರುವ, ಸುಂದರವಾಗಿ ಮಾತನಾಡುವ, ವಿದ್ಯಾವಂತ, ಹಾಸ್ಯಭರಿತ ವ್ಯಕ್ತಿತ್ವದವರು ನೀವು… ನಿಮ್ಮಂತೆ ಮತ್ತೊಬ್ಬರು ಇರಲು ಆಗುವುದಿಲ್ಲ.. ಎಲ್ಲದಕ್ಕಾಗಿ ಧನ್ಯವಾದಗಳು… ಎಂದು ಬರೆದುಕೊಂಡಿದ್ದಾರೆ. ಕೊನೆಯಲ್ಲಿ ನೀವು ಈಗ ನಿಮ್ಮ ಬೆಸ್ಟ್‌ಫ್ರೆಂಡ್‌ ಜೊತೆಗೆ ಇದ್ದೀರಾ ಎಂದು ಬರೆದು ಹಾರ್ಟ್‌ ಎಮೊಜಿ ಹಾಕಿದ್ದಾರೆ.

ಮಂಗಳವಾರ (ಡಿ.10) ಸದಾಶಿವನಗರ ಆಗಮಿಸಿ ಎಸ್‌ಎಂ ಕೃಷ್ಣ ಪಾರ್ಥಿವ ಶರೀರಕ್ಕೆ ಆಗಮಿಸಿದ್ದ ರಮ್ಯಾ ಅಂತಿಮ ನಮನ ಸಲ್ಲಿಸಿ, ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟಿದ್ದರು. ಈಗ ನಾನು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿ ತೆರಳಿದ್ದರು. 

ಸಿನಿಮಾ ರಂಗದಲ್ಲಿದ್ದ ರಮ್ಯಾ ಅವರನ್ನು ರಾಜಕಾರಣಕ್ಕೆ ಕರೆತಂದಿದ್ದೇ ಎಸ್‌ಎಂಕೆ. ಈ ಕಾರಣದಿಂದ ಹಲವಾರು ಬಾರಿ ರಮ್ಯಾ ಅವರು ಎಸ್‌ಎಂಕೆ ನಿವಾಸಕ್ಕೆ ತೆರಳಿ ಮಾತನಾಡಿ ಸಲಹೆಗಳನ್ನು ಪಡೆಯುತ್ತಿದ್ದರು. ಎಸ್‌.ಎಂ ಕೃಷ್ಣ ಅವರ ನೇತೃತ್ವದಲ್ಲೇ ರಾಜಕಾರಣಕ್ಕೆ ಕಾಲಿಟ್ಟ ರಮ್ಯಾ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆದರು. ತಮ್ಮ ಸೆಲೆಬ್ರಿಟಿ ಇಮೇಜ್‌ನಿಂದಾಗಿ ಹೈಕಮಾಂಡ್‌ನಲ್ಲಿ ಶೀಘ್ರವಾಗಿ ಗುರುತಿಸಿಕೊಂಡಿದ್ದರು.

ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿ ಹೈಕಮಾಂಡ್‌ನ ಪ್ರಭಾವಶಾಲಿ ನಾಯಕರ ಜೊತೆ ನೇರವಾಗಿ ಸಂಪರ್ಕ ಸಾಧಿಸಬಲ್ಲ ರಾಜ್ಯದ ಕೆಲವೇ ಕಾಂಗ್ರೆಸ್ಸಿಗರಲ್ಲಿ ರಮ್ಯಾ ಕೂಡ ಒಬ್ಬರಾಗಿದ್ದರು. ಕೃಷ್ಣ ಅವರನ್ನು ಅಂಕಲ್‌ ಎಂದೇ ಕರೆಯುತ್ತಿದ್ದ ರಮ್ಯಾ, ಕೃಷ್ಣ ಅವರ ಮಾರ್ಗದರ್ಶನದಲ್ಲೇ ರಾಜಕೀಯ ನಡೆಗಳನ್ನು ಇಟ್ಟವರು. ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ನ ಒಳ ರಾಜಕಾರಣವನ್ನು ಭೇದಿಸಿ ಸಂಸದರಾಗಲು ಈ ಮಾರ್ಗದರ್ಶನವೇ ಅವರಿಗೆ ರಕ್ಷೆಯಾಗಿತ್ತು.

Ads on article

Advertise in articles 1

advertising articles 2

Advertise under the article