
ಮಾನವೀಯತೆಯಿಂದ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ: ನ್ಯಾ.ಸಂತೋಷ್ ಹೆಗ್ಡೆ
ಉಡುಪಿ: ಮಾನವೀಯತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ನೀಡಲಾಗುವ ಪದ್ಮ ವಿಭೂಷಣ ಜಾರ್ಜ್ ಫೆರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಉಡುಪಿ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿ ಅವರು ಮಾತನಾಡಿದರು.
ದೇಶದಲ್ಲಿ ಹಗರಣಗಳು ನಡೆಯದಿದ್ದರೆ ದೇಶದ ಆರ್ಥಿಕ ಸ್ಥಿತಿ ಇನ್ನಷ್ಟು ಎತ್ತರಕ್ಕೆ ಹೋಗುತ್ತಿತ್ತು. ಈ ಹಗರಣ ಗಳಿಂದ ತೊಂದರೆ ಅನುಭವಿಸುವುದು ಸರಕಾರದಿಂದ ಸವಲತ್ತುಗಳನ್ನು ಪಡೆಯಬೇಕಾಗಿದ್ದ ಸಮಾಜದ ಕಟ್ಟಕಡೆಯ ವ್ಯಕ್ತಿ. ಇದರಿಂದ ಶ್ರೀಮಂತರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ದೇಶದಲ್ಲಿ ಕೋಟಿ ಕೋಟಿ ಹಗರಣಗಳು ನಡೆಯುತ್ತಿದ್ದರೆ ಮುಂದೆ ಸಮಾಜದಲ್ಲಿ ಶಾಂತಿ ಇರುವುದಿಲ್ಲ. ಯಾರಿಗೆ ಹಣ ಸೇರಬೇಕೊ ಅವರಿಗೆ ಹಣ ಸಿಗದಿದ್ದರೆ ಈ ದೇಶದಲ್ಲಿ ಕ್ರಾಂತಿ ಆಗಬಹುದು. ದೇಶದಲ್ಲಿ ಭಾಷೆ ಹಾಗೂ ಧರ್ಮದ ಆಧಾರದಲ್ಲಿ ಕ್ರಾಂತಿಯಾದರೆ 25ಕ್ಕೂ ಅಧಿಕ ಬೇರೆ ದೇಶಗಳ ಸೃಷ್ಠಿಯಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ವಹಿಸಿದ್ದರು. ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ, ಚಿತ್ರನಟ ಸುಮನ್ ತಲ್ವಾರ್, ಅದಾನಿ ಗ್ರೂಪ್ನ ಕಾರ್ಯ ನಿರ್ವಾ ಹಕ ನಿರ್ದೇಶಕ ಕಿಶೋರ್ ಆಳ್ವ ಮುಖ್ಯ ಅತಿಥಿಗಳಾಗಿದ್ದರು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ರಾಜ್ಯ ಸಂಯೋಜಕ ಕೆ.ಪಿ.ಜಗದೀಶ್ ಅಧಿಕಾರಿ ಉಪಸ್ಥಿತರಿದ್ದರು. ಸಮಿತಿಯ ಸ್ಥಾಪಕ ತೋನ್ಸೆ ಜಯಶ್ರೀಷ್ಣ ಎ.ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಎಂ.ಶೆಟ್ಟಿ ಸ್ವಾಗತಿಸಿದರು. ದಯಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿದರು.