ಪಂಚಭೂತಗಳಲ್ಲಿ ಲೀನರಾದ ಭೀಮಣ್ಣ ಖಂಡ್ರೆ: ಸಕಲ ಸರ್ಕಾರಿ ಗೌರವದೊಂದಿಗೆ ಸ್ವಾತಂತ್ರ್ಯ ಹೋರಾಟಗಾರನ ಅಂತ್ಯಕ್ರಿಯೆ
ಬೀದರ್: ಶುಕ್ರವಾರ ರಾತ್ರಿ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ಶನಿವಾರ ಪಂಚಭೂತಗಳಲ್ಲಿ ಲೀನವಾಗಿದ್ದು, ಭಾಲ್ಕಿ ಹೊರವಲಯದ ಚಿಕಲ್ ಚೆಂದ ರಸ್ತೆಯಲ್ಲಿರುವ ಶಾಂತಿಧಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿದೆ.
ಶನಿವಾರ ಸಂಜೆ ಪತ್ನಿ ಲಕ್ಷ್ಮೀಬಾಯಿ ಸಮಾಧಿ ಪಕ್ಕದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿವಿಧಾನದಂತೆ ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆ ನಡೆಸಲಾಗಿದೆ.
ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಎಚ್. ಕೆ ಪಾಟೀಲ್, ಎಸ್.ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಹಲವು ಗಣ್ಯರು ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದರು.
ತಂದೆಯ ಅಗಲಿಕೆಯ ನೋವಿನೊಂದಿಗೆ ಕೃತಜ್ಞತೆ ಸಲ್ಲಿಸಿದ ಈಶ್ವರ್ ಖಂಡ್ರೆ
ನಮ್ಮ ತಂದೆಯವರಾದ ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಅವರ ಅಂತಿಮ ಸಂಸ್ಕಾರಗಳನ್ನು ಸರ್ಕಾರದ ಸಂಪೂರ್ಣ ಗೌರವಗಳೊಂದಿಗೆ ನೆರವೇರಿಸಲಾಯಿತು.ಅವರ ಜನಪರ ಬದುಕು, ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳಿಗೆ ದೊರೆತ ಈ ಗೌರವವು ನಮ್ಮ ಕುಟುಂಬಕ್ಕೆ ಅಪಾರ ಸಂತೋಷದ ಜೊತೆಗೆ ಆಳವಾದ ಭಾವುಕತೆಯನ್ನು ತಂದಿದೆ ಎಂದು ಸಚಿವ ಈಶ್ವರ್ ಖಂಡ್ರೆ ಅವರು ಅತೀವ ನೋವು ಮತ್ತು ಕೃತಜ್ಞತೆಯನ್ನು ತೋಡಿಕೊಂಡಿದ್ದಾರೆ.
ಈ ದುಃಖದ ಘಳಿಗೆಯಲ್ಲಿ ನಮ್ಮ ಕುಟುಂಬದೊಂದಿಗೆ ನಿಂತು, ಅಂತಿಮ ಯಾತ್ರೆ, ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಆಶೀರ್ವಾದ ಹಾಗೂ ಗೌರವ ಸಲ್ಲಿಸಿದ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಇಳಕಲ್ ಸ್ವಾಮೀಜಿಗಳು, ನಿಜಗುಣಾನಂದ ಮಹಾಸ್ವಾಮೀಜಿಗಳು, ಜಯಮೃತ್ಯುಂಜಯ ಸ್ವಾಮೀಜಿಗಳು, ಡಾ. ಬಸವಲಿಂಗ ಪಟ್ಟದೇವರು, ಸೇರಿದಂತೆ ಜಿಲ್ಲೆಯ ಹಾಗೂ ನಾಡಿನ ಸಮಸ್ತ ಮಠಾಧೀಶರಿಗೆ ನನ್ನ ಹಾಗೂ ನಮ್ಮ ಕುಟುಂಬದ ಹೃದಯಪೂರ್ವಕ ಕೃತಜ್ಞತೆಗಳು. ಇದೇ ಸಂದರ್ಭದಲ್ಲಿ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕ ಮಿತ್ರರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯಾತಿ ಗಣ್ಯರು ನೀಡಿದ ಗೌರವ ಮತ್ತು ಸಾನಿಧ್ಯಕ್ಕೆ ನನ್ನ ಹಾಗೂ ನಮ್ಮ ಕುಟುಂಬದ ಆಭಾರವನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದಲ್ಲದೆ, ಅಧಿಕಾರಿಗಳು, ಪೊಲೀಸ್ ಇಲಾಖೆ, ಪಕ್ಷದ ಸಹೋದ್ಯೋಗಿಗಳು, ಮಿತ್ರರು, ಹಿತೈಷಿಗಳು ಹಾಗೂ ಅಪಾರ ಸಾವಿರಾರು ಸಾರ್ವಜನಿಕರು ನೀಡಿದ ಪ್ರೀತಿ, ಪ್ರಾರ್ಥನೆ ಮತ್ತು ಸಹಾನುಭೂತಿ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನಮಗೆ ನೀಡಿದೆ. ತಂದೆಯವರ ಸ್ಮರಣೆ, ಅವರ ಮೌಲ್ಯಗಳು ಮತ್ತು ಅವರು ಹಾಕಿಕೊಟ್ಟ ಬದುಕಿನ ದಾರಿ ಸದಾ ನಮ್ಮೆಲ್ಲರ ಮನಸ್ಸಿನಲ್ಲಿ ಜೀವಂತವಾಗಿರಲಿದೆ ಎಂದು ಈಶ್ವರ್ ಹೇಳಿದ್ದಾರೆ.