ಬೆಳ್ತಂಗಡಿ ಸುಮಂತ್ ಕೊಲೆ ಪ್ರಕರಣ: ತೀವ್ರಗೊಂಡ ತನಿಖೆ; ಕೆರೆಯಲ್ಲಿ ಟಾರ್ಚ್, ಹಳೆಯ ತುಕ್ಕು ಹಿಡಿದ ಕತ್ತಿ ಪತ್ತೆ

ಬೆಳ್ತಂಗಡಿ: ಕೊಲೆಯಾದ ಬಾಲಕ ಓಡಿಲ್ನಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್(15) ಮೃತದೇಹ ಪತ್ತೆಯಾದ ಕೆರೆಯಲ್ಲಿ ಬಾಲಕ ಹಿಡಿದುಕೊಂಡು ಹೋಗಿದ್ದ ನೀಲಿ ಬಣ್ಣದ ಲೈಟ್ ಪತ್ತೆಯಾಗಿದೆ. ಅದಲ್ಲದೆ ಕೆರೆಯಲ್ಲಿ ಹಳೆಯ ತುಕ್ಕು ಹಿಡಿದ ಕತ್ತಿಯೂ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಬುಧವಾರ ಮನೆಯಿಂದ ಬೆಳಗ್ಗೆ ದೇವಸ್ಥಾನಕ್ಕೆಂದು ಹೊರಟಿದ್ದ ಸುಮಂತ್ ಮೃತದೇಹ ಬಳಿಕ ಕೆರೆಯಲ್ಲಿ ಪತ್ತೆಯಾಗಿತ್ತು. ಇದೊಂದು ಕೊಲೆ ಕೃತ್ಯ ಎಂದು ದೃಢಪಡಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಗುರುವಾರ ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಮೃತದೇಹ ಪತ್ತೆಯಾದ ಕೆರೆಯ ನೀರನ್ನು ಸಂಪೂರ್ಣವಾಗಿ ಬತ್ತಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆರೆಯಲ್ಲಿ ಬಾಲಕ ಮನೆಯಿಂದ ತಂದಿದ್ದ ಲೈಟ್ ಪತ್ತೆಯಾಗಿದೆ. ಅದೇರೀತಿ ಹಳೆಯ ಕತ್ತಿಯೊಂದು ಪತ್ತೆಯಾಗಿದೆ.

ಸೋಕೋ ತಂಡ ಹಾಗೂ ಪೊಲೀಸರು ಈ ವಸ್ತಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.