ಕೇತನ್ ಅಗರ್ವಾಲ್ ಕೊಲೆ ಪ್ರಕರಣ; ಆರೋಪಿ ಭಾವಿ ಪತ್ನಿ ಹೇಳಿದ್ದೇನು...?

ಪುಣೆ: ಪುಣೆಯ ಲೋಹಗಢ ಕೋಟೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಭಾವಿ ಪತಿಯನ್ನು ಕೊಲ್ಲುವಂತೆ ಸಿಯಾ ಗೋಯಲ್ ಗೆ ಆಕೆಯ ಪ್ರಿಯಕರ, ಪ್ರಕರಣದ ಸಹ ಆರೋಪಿ ಚೇತನ್ ಚೌಧರಿ ಪ್ರೇರೇಪಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

"ಇಬ್ಬರೂ ಆರೋಪಿಗಳನ್ನು ವಿಚಾರಣೆ ಒಳಪಡಿಸಿದ್ದು, ವಿಚಾರಣೆ ವೇಳೆ ಲೋಹಗಡ್ ಕೋಟೆಯಲ್ಲಿ ಅಗರ್ವಾಲ್ ಅವರನ್ನು ಕೊಲೆ ಮಾಡಲು ಸಿಯಾಗೆ ಪ್ರೇರೇಪಿಸಿದ್ದು ಚೌಧರಿ ಎಂದು ತಿಳಿದುಬಂದಿರುವುದಾಗಿ" ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಗೋಯಲ್ ಅವರ ಸಹೋದರನನ್ನೂ ಪ್ರಶ್ನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇತನ್ ಅಗರ್ವಾಲ್ ವಿಗ್ ಧರಿಸುತ್ತಿದ್ದರಿಂದ ಸಿಯಾ ಅವರನ್ನು ಇಷ್ಟಪಡಲಿಲ್ಲ ಎಂಬ ಮಾಧ್ಯಮ ವರದಿಗಳ ಬಗ್ಗೆ ಕೇಳಿದಾಗ, ಅಗರ್ವಾಲ್ ವಿಗ್ ಧರಿಸುತ್ತಿದ್ದರು ಎಂಬುದು ನಿಜ, ಆದರೆ ಸಿಯಾ, ಅವರನ್ನು ಇಷ್ಟಪಡದಿರಲು ಅದೇ ಕಾರಣ ಎಂದು ಹೇಳಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 18 ರಂದು ಜಿಲ್ಲೆಯ ಲೋಹಗಡ್ ಕೋಟೆಯಿಂದ ತಳ್ಳಲ್ಪಟ್ಟ 25 ವರ್ಷದ ಅಗರ್ವಾಲ್ ಅವರ ಹತ್ಯೆಗೆ ಪಿತೂರಿ ನಡೆಸಿದ ಆರೋಪವನ್ನು ಗೋಯಲ್ (20) ಮತ್ತು ಚೌಧರಿ(22) ಮೇಲೆ ಹೊರಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಕೇತನ ಮತ್ತು ಸಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನವೆಂಬರ್‌ನಲ್ಲಿ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿ ವಿವಾಹ ನಡೆಯಬೇಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ವಿಚಾರಣೆ ವೇಳೆ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರೂ, ಕೇವಲ ಒಪ್ಪಿಗೆಯ ಹೇಳಿಕೆಯನ್ನು ಅವಲಂಬಿಸದೇ, ಸಿಸಿಟಿವಿ ದೃಶ್ಯಗಳು, ವಿಧಿವಿಜ್ಞಾನ ವರದಿಗಳು, ಡಿಜಿಟಲ್ ದಾಖಲೆಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳ ಮೂಲಕ ಅವುಗಳನ್ನು ದೃಢೀಕರಿಸಿದ ಬಳಿಕವೇ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಬಂಧನದಲ್ಲಿದ್ದು, ಕೇತನ ಅಗರವಾಲ್ ಸಾವಿಗೆ ಕಾರಣವಾದ ನಿಖರ ಘಟನೆಗಳ ಸರಮಾಲೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.