ರಾಮನವಮಿ ಆಚರಣೆಯಲ್ಲಿ ಕತ್ತಿ-ದೊಣ್ಣೆಗಳ ಪ್ರದರ್ಶನ ವೇಳೆ 700 ಜನರಿಗೆ ಗಾಯ
ಜಾರ್ಖಂಡ್: ರಾಮ ನವಮಿ ಆಚರಣೆಯ ಸಂದರ್ಭದಲ್ಲಿ ಕತ್ತಿ ಹಾಗು ದೊಣ್ಣೆಗಳ ಪ್ರದರ್ಶನದ ವೇಳೆ ಸುಮಾರು 700 ಜನರು ಗಾಯಗೊಂಡಿರುವ ಘಟನೆ ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಆರಂಭವಾದ ರಾಮನವಮಿ ಉತ್ಸವ ಶನಿವಾರ ಸಂಜೆ ಮುಕ್ತಾಯವಾಗಿದ್ದು, ಧಾರಾಕಾರ ಸುರಿದ ಮಳೆಯ ನಡುವೆ ಬೋಡುಮ್ ಬಜಾರ್ನಲ್ಲಿ ಶತಮಾನಗಳಷ್ಟು ಹಳೆಯದಾದ ಉತ್ಸವದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿಸಿರುವ ಅಧಿಕಾರಿಗಳು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಉತ್ಸವದ ವೇಳೆ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಹಜಾರಿಬಾಗ್ ವೈದ್ಯಕೀಯ ಕಾಲೇಜು ಹಾಗು ಆಸ್ಪತ್ರೆ(ಎಚ್ಎಂಸಿಎಚ್) 15 ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಾಗಿತ್ತು ಎಂದಿದ್ದಾರೆ.
ಉತ್ಸವದಲ್ಲಿ ಸಾಂಪ್ರದಾಯಿಕ ಆಯುಧಗಳೊಂದಿಗೆ ಪ್ರದರ್ಶನ ನಡೆಯುತ್ತಿದ್ದಾಗ ಸುಮಾರು 700 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನವರಿಗೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಲವರನ್ನು ವಿವಿಧ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಎಚ್ಎಂಸಿಎಚ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.