
ಮಳೆಗೆ ಬಿದ್ದ ಕಲಾವಿದನ ಮನೆ, ಒಂದೇ ತಿಂಗಳಲ್ಲಿ ಹೊಸ ಮನೆ ನಿರ್ಮಿಸಿಕೊಟ್ಟ ಉಡುಪಿ ಯಕ್ಷಗಾನ ಕಲಾರಂಗ!
ಉಡುಪಿ: ಇದೊಂದು ಪವಾಡವೇ ಸರಿ! ಗಾಳಿ ಮಳೆಗೆ ಹಾರಿ ಹೋದ ಮನೆಯೊಂದನ್ನು ಒಂದೇ ತಿಂಗಳಲ್ಲಿ ಹೊಸತಾಗಿ ಕಟ್ಟಿಕೊಟ್ಟ ಮಾನವೀಯ ಕಳಕಳಿಯ ಕೆಲಸವನ್ನು ಉಡುಪಿಯ ಯಕ್ಷಗಾನ ಕಲಾ ರಂಗ ಸಂಸ್ಥೆ ಮಾಡಿದೆ. ಮಂದಾರ್ತಿ ಮೇಳದ ಹಿಮ್ಮೇಳ ಕಲಾವಿದರೊಬ್ಬರು ಮಳೆಗಾಲದ ಆರಂಭದಲ್ಲಿ ತಮ್ಮ ಮನೆಯನ್ನು ಕಳೆದುಕೊಂಡರು. ಗುಡಿಸಲಿನಂತಿದ್ದ ಮನೆಯಲ್ಲಿ ವೃದ್ಧ ತಂದೆ ತಾಯಿಯ ಜೊತೆ ವಾಸ ಮಾಡುತ್ತಿದ್ದ ಇವರು ಮನೆ ಕಳೆದುಕೊಂಡು ಅನಾಥರಾದರು.
ವಿಷಯ ತಿಳಿದ ಸಂಸ್ಥೆಯವರು ಏಪ್ರಿಲ್ 20 ಕ್ಕೆ ನೂತನ ಮನೆಗೆ ಶಿಲಾನ್ಯಾಸ ಮಾಡಿದ್ದರು. ಇದೀಗ ತಿಂಗಳು ಕಳೆಯುತ್ತಿದ್ದಂತೆ ಹೊಸ ಮನೆ ಸಿದ್ಧವಾಗಿದೆ. ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಈ ಮನೆಯ ಗೃಹಪ್ರವೇಶ ನಡೆಸಿದ್ದಾರೆ. ಯಕ್ಷಗಾನ ಕಲಾರಂಗ ನಿರ್ಮಿಸಿಕೊಟ್ಟಿರುವ 73 ನೆಯ ಮನೆ ಇದಾಗಿದೆ. ಮಂದಾರ್ತಿ ಮೇಳದ ಕಲಾವಿದರಾದ ಸುರೇಶ್ ಆಚಾರ್ಯ ಮನೆ ಕಳೆದುಕೊಂಡಿದ್ದ ಕಲಾವಿದ. ಇವರಿಗೆ ಬ್ರಹ್ಮಾವರ ತಾಲೂಕಿನ ಪೇತ್ರಿಯ ಕನ್ನಾರಿನಲ್ಲಿ ಮಂದಾರ್ತಿ ಕೃಷ್ಣ ಅಡಿಗರ ಸ್ಮರಣೆಯಲ್ಲಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್, ಹೆಬ್ರಿ ಇದರ ಪ್ರಾಯೋಜಕತ್ವದಲ್ಲಿ 6.50 ಲಕ್ಷ ರೂ.ವೆಚ್ಚದಲ್ಲಿ ಕೇವಲ 40 ದಿನಗಳಲ್ಲಿ ನಿರ್ಮಿಸಲಾಗಿದೆ.