ಮಲಪ್ಪುರಂ: ಮಿಕ್ಸ್ಚರ್ ತಿನ್ನುವಾಗ ಗಂಟಲಲ್ಲಿ ಕಡಲೆ ಕಾಯಿ ಬೀಜ ಸಿಲುಕಿ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂ ನಲ್ಲಿ ನಡೆದಿದೆ.
ಮಲಪ್ಪುರಂ ಜಿಲ್ಲೆಯ ಕುನ್ನುಂಪುರಂನ ಚೆಂಗಣಿ ನಿವಾಸಿಗಳಾದ ಮುನೀರ್ ಮತ್ತು ಫರ್ಸಿನಾ ದಂಪತಿಯ ಮೂರು ವರ್ಷದ ಮಗ ಮುಹಮ್ಮದ್ ರಿಝಾನ್ ಬಲಿಯಾದ ದುರ್ದೈವಿ.
ಸೋಮವಾರ ಬೆಳಗ್ಗೆ ಮನೆಯಲ್ಲಿ ಮಗುವಿಗೆ ತಿನ್ನಲು ನೀಡಲಾಗಿದ್ದ ಮಿಕ್ಸ್ಚರ್ ಸೇವಿಸುತ್ತಿದ್ದಾಗ, ಅದರಲ್ಲಿನ ಕಡಲೇ ಬೀಜ ಆಕಸ್ಮಿಕವಾಗಿ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿಗೆ ತಕ್ಷಣವೇ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಒದ್ದಾಡಲಾರಂಭಿಸಿದೆ.
ಮಗು ಉಸಿರುಗಟ್ಟಿ ಒದ್ದಾಡುತ್ತಿರುವುದನ್ನು ಕಂಡು ಗಾಬರಿಯಾದ ಪೋಷಕರು ತಕ್ಷಣವೇ ಆತನನ್ನು ಕುನ್ನುಂಪುರಂನ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ವೈದ್ಯರು ಮಗುವಿನ ಪ್ರಾಣ ಉಳಿಸಲು ಶ್ರಮಿಸಿದರಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಮಿಕ್ಸ್ಚರ್ನಲ್ಲಿದ್ದ ಕಡಲೇ ಬೀಜ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಟ ಸ್ಥಗಿತಗೊಂಡಿದ್ದೇ ಸಾವಿಗೆ ನೇರ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
