ಧರ್ಮಸ್ಥಳದ ಬಗ್ಗೆಗಿನ ಆರೋಪಗಳು ಆಧಾರರಹಿತ-ಸುಳ್ಳು; ಧರ್ಮಸ್ಥಳದ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ-ಎಸ್‌ಐಟಿ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲ: ಧರ್ಮಸ್ಥಳ ಪ್ರಕರಣದ ಬಗ್ಗೆ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ

ಧರ್ಮಸ್ಥಳದ ಬಗ್ಗೆಗಿನ ಆರೋಪಗಳು ಆಧಾರರಹಿತ-ಸುಳ್ಳು; ಧರ್ಮಸ್ಥಳದ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ-ಎಸ್‌ಐಟಿ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲ: ಧರ್ಮಸ್ಥಳ ಪ್ರಕರಣದ ಬಗ್ಗೆ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ

ಬೆಂಗಳೂರು: ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. 'ಧರ್ಮಸ್ಥಳದ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ. ಎಸ್‌ಐಟಿ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲ ಇದ್ದು, ಸತ್ಯ ಹೊರ ಬರಲಿದೆ ಎಂಬ ವಿಶ್ವಾಸ ಇದೆ. ಈ ಆರೋಪಗಳು ಆಧಾರರಹಿತ ಮತ್ತು ಸುಳ್ಳು' ಎಂದು ಧರ್ಮಾಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಪಿಟಿಐಗೆ ವಿಡಿಯೋ ಸಂದರ್ಶನ ನೀಡಿರುವ ವೀರೇಂದ್ರ ಹೆಗ್ಗಡೆ, ಭಕ್ತರನ್ನು ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಈ ಆರೋಪಗಳನ್ನು ಮಾಡಲಾಗಿದೆ. ಇದರಿಂದ ತೀವ್ರ ನೋವುಂಟಾಗಿದೆ ಎಂದು ಹೇಳಿದರು.

ಈ ಕುರಿತು ತನಿಖೆಗೆ ಕರ್ನಾಟಕ ಸರಕಾರ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚಿಸಿರುವುದನ್ನು ಸ್ವಾಗತಿಸಿದ ಹೆಗ್ಗಡೆ, ಎಸ್ಐಟಿ ರಚಿಸಿರುವುದು ಒಳ್ಳೆಯದಾಗಿದೆ. ಸತ್ಯ ಎಲ್ಲರಿಗೂ ತಿಳಿಯಲು ಆದಷ್ಟು ಬೇಗ ತನಿಖೆ ಪೂರ್ಣಗೊಳ್ಳಲಿ. ನಾವು ನಮ್ಮ ಎಲ್ಲಾ ದಾಖಲೆಗಳನ್ನು ತೆರೆದಿಟ್ಟಿದ್ದೇವೆ. ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುತ್ತಿಲ್ಲ. ಎಲ್ಲಾ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಗಳು ಟ್ರಸ್ಟ್ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ನಮ್ಮ ಕುಟುಂಬದ ಒಡೆತನದ ಆಸ್ತಿ ಬಹಳ ಕಡಿಮೆಯಿದೆ. ಹೆಚ್ಚಿನ ಆಸ್ತಿಯು ಟ್ರಸ್ಟ್‌ನದ್ದಾಗಿದೆ ಮತ್ತು ಅದಕ್ಕೆ ದಾಖಲೆಗಳಿವೆ. ಕಳೆದ 14 ವರ್ಷಗಳಿಂದ ಧರ್ಮಸ್ಥಳದ ವಿರುದ್ಧ ಸುಳ್ಳು ಪ್ರಚಾರ ನಡೆಯುತ್ತಿದ್ದರೂ ನಾವು ಅಚಲವಾಗಿ ನಮ್ಮ ಸಮಾಜ ಸೇವೆಯನ್ನು ಮುಂದುವರಿಸಿದ್ದೇವೆ ಎಂದು ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ವೀರೇಂದ್ರ ಹೆಗ್ಗಡೆ, ಈ ಆರೋಪಗಳು ಸುಳ್ಳಾಗಿದೆ. ಧರ್ಮಸ್ಥಳದಲ್ಲಿ ನಿಧನ ಹೊಂದಿದವರು ಮೋಕ್ಷವನ್ನು ಪಡೆಯುತ್ತಾರೆ ಎಂಬ ಜನಪ್ರಿಯ ನಂಬಿಕೆ ಇದೆ. ಯಾರೇ ಮೃತಪಟ್ಟರೂ ನಾವು ಪಂಚಾಯತ್‌ಗೆ ತಿಳಿಸಿ ಕಾನೂನಿನಂತೆಯೇ ಮುಂದಿನ ಕಾರ್ಯವನ್ನು ನಡೆಸಿದ್ದೇವೆ. ಈಗ ಪ್ರಚಾರದಲ್ಲಿರುವ ಆರೋಪಗಳು ಕಟ್ಟುಕಥೆ ಎಂದು ಹೇಳಿದರು.

ಪಕ್ಷಾತೀತವಾಗಿ ರಾಜಕೀಯ ನಾಯಕರು ಧರ್ಮಸ್ಥಳಕ್ಕೆ ಬೆಂಬಲವಾಗಿ ಭೇಟಿ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ವೀರೇಂದ್ರ ಹೆಗ್ಗಡೆ, ಇದು ರಾಜಕೀಯ ವಿಷಯವಲ್ಲ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇಲ್ಲಿಗೆ ಬಂದಿದ್ದಾರೆ. ಕೆಲವರು ದೇವಾಲಯದ ಮಾನಹಾನಿ ಮಾಡಲು ಪ್ರಯತ್ನಿಸುತ್ತಿರುವುದರಿಂದ ಎಲ್ಲಾ ಪಕ್ಷಗಳು ದೇವಸ್ಥಾನದ ಪರವಾಗಿ ನಿಂತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿರುವುದನ್ನು ಹೆಗ್ಗಡೆ ಸ್ವಾಗತಿಸಿದರು. ಇದು ಪಕ್ಷಪಾತರಹಿತ ನಿಲುವು. ದೇವಾಲಯದ ಅಧಿಕಾರಿಗಳು ತಪ್ಪು ಮಾಡಿದ್ದರೆ, ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಇತರರು ತಪ್ಪಿತಸ್ಥರಾಗಿದ್ದರೆ ಅವರಿಗೂ ಶಿಕ್ಷೆಯಾಗಬೇಕು ಎಂದು ಹೆಗ್ಡೆ ಹೇಳಿದರು.

ಸಾಮಾಜಿಕ ಮಾಧ್ಯಮದ ಪ್ರಭಾವ ಮತ್ತು ʼಕಾಂತಾರʼ ಚಲನಚಿತ್ರದಂತಹ ಜನಪ್ರಿಯ ಸಂಸ್ಕೃತಿಯಲ್ಲಿನ ಉಲ್ಲೇಖಗಳ ಬಗ್ಗೆ ಮಾತನಾಡಿದ ಅವರು, ವಿಷಯಗಳನ್ನು ಬಿಂಬಿಸುವ ರೀತಿ ನಮಗೆ ಆಘಾತವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮವು ಪ್ರಬಲವಾಗಿದೆ ಮತ್ತು ದುರದೃಷ್ಟವಶಾತ್, ಕೆಲ ಸ್ವಾರ್ಥಿಗಳು ಯುವ ಮನಸ್ಸುಗಳನ್ನು ಕಲುಷಿತಗೊಳಿಸಲು ಅದನ್ನು ಬಳಸಿಕೊಂಡಿದ್ದಾರೆ. ನಾವು ನಮ್ಮ ಒಳ್ಳೆಯ ಕೆಲಸವನ್ನು ಎಂದಿಗೂ ಪ್ರಚಾರ ಮಾಡಿಲ್ಲ. ಆದರೆ ನಮ್ಮ ಸೇವೆ 55 ಲಕ್ಷ ಕುಟುಂಬಗಳನ್ನು ತಲುಪಿದೆ ಎಂದರು.

ಸತ್ಯವೇ ಗೆಲ್ಲುತ್ತದೆ, ಈ ಪಿತೂರಿಗಳು ಕೊನೆಗೊಳ್ಳುತ್ತವೆ ಎಂದು ಇದೇ ವೇಳೆ ವೀರೇಂದ್ರ ಹೆಗ್ಗಡೆ ವಿಶ್ವಾಸ ವ್ಯಕ್ತಪಡಿಸಿದರು. ಈ ಎಲ್ಲಾ ಆರೋಪಗಳು ಸುಳ್ಳು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಲೇ ಇದ್ದಾರೆ. ಪೂಜೆ, ಆಚರಣೆಗಳು ಮತ್ತು ಸಂಪ್ರದಾಯಗಳು ಎಂದಿನಂತೆ ನಡೆಯುತ್ತಿವೆ ಮತ್ತು ಧರ್ಮಸ್ಥಳದ ಮೇಲಿನ ನಂಬಿಕೆ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದರು.

Ads on article

Advertise in articles 1

advertising articles 2

Advertise under the article