ನವದೆಹಲಿ: ನಮ್ಮ ಹೋರಾಟ ಅಂತ್ಯವಾಗಬೇಕಾದರೆ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಲೇಬೇಕು ಎಂದು ಸಿಜೆಪಿಯ (CJP) ಸಂಸ್ಥಾಪಕ ಅಭಿಜಿತ್ ದಿಪ್ಕೆ (Abhijeet Dipke) ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಭರವಸೆ ಸಿಕ್ಕ ನಂತರ ಗುರುವಾರ (ಜು.23) ರಾತ್ರಿ ಸೋನಮ್ ವಾಂಗ್ಚುಕ್ ಅವರು ಉಪವಾಸವನ್ನು ಕೈಬಿಟ್ಟಿದ್ದಾರೆ. ಇದೀಗ ವಾಂಗ್ಚುಕ್ ಅವರೇ ಪ್ರತಿಭಟನೆ ಕೈಬಿಡುವಂತೆ ಕೇಳಿಕೊಂಡರೂ ಕೂಡ ನಾವು ಹಿಂತೆಗೆದುಕೊಳ್ಳುವುದಿಲ್ಲ. ಸಮಸ್ಯೆ ಬಗೆಹರಿಯಬೇಕಾದರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರದ ಜೊತೆ 2ನೇ ಹಂತದ ಮಾತುಕತೆ ಆರಂಭಿಸುವ ಮುನ್ನ ದಿಪ್ಕೆ ಈ ಬೇಡಿಕೆಯನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲೇಬೇಕು. ರಾಜೀನಾಮೆ ಹೊರತುಪಡಿಸಿ ಬೇರೆ ಯಾವುದೇ ಪರಿಹಾರ ನಮಗೆ ಬೇಡ. ಈ ಹೋರಾಟ ನನಗೆ ಹಾಗೂ ವಾಂಗ್ಚುಕ್ ಅವರಿಗೆ ಸೇರಿದ್ದಲ್ಲ. ಇದು ದೇಶದ ಎಲ್ಲಾ ಯುವಕರ ಚಳುವಳಿಯಾಗಿದೆ. ಆದ್ದರಿಂದ ರಾಜೀನಾಮೆ ಒಂದೇ ಇದಕ್ಕೆ ಅಂತಿಮ ಪರಿಹಾರ ಎಂದಿದ್ದಾರೆ.
ಈ ಕುರಿತು ಸಿಜೆಪಿ ವಕ್ತಾರ ಸೌರವ್ ದಾಸ್ ಮಾತನಾಡಿ, ಮಾತುಕತೆ ಯಾವಾಗ ಬೇಕಾದರೂ ನಡೆಸಬಹುದು, ಆದರೆ ಅದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಮನೆಯಲ್ಲೇ ನಡೆಯಬೇಕು ಎಂದು ಸರ್ಕಾರ ಹೇಳಿತ್ತು. ಆದರೆ ಕಾಕ್ರೋಚ್ ಜನತಾ ಪಾರ್ಟಿಯು ಸಚಿವರ ಮನೆಗೆ ಹೋಗುವ ಬದಲು, ಸರ್ಕಾರವೇ ಪ್ರತಿಭಟನೆ ನಡೆಯುತ್ತಿರುವ `ಜಂತರ್ ಮಂತರ್’ ಸ್ಥಳಕ್ಕೆ ಬರಬೇಕು ಅಥವಾ ಯಾವುದಾದರೂ ಸಾರ್ವಜನಿಕ ಪ್ರದೇಶದಲ್ಲಿ ಮಾತುಕತೆ ನಡೆಸಬೇಕು ಎಂದಿದ್ದೆವು. ನಮ್ಮ ನಿರ್ಧಾರವನ್ನು ಸರ್ಕಾರ ಒಪ್ಪಿಕೊಂಡಿತು. ಅದರಂತೆ `ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ ಎಂಬಲ್ಲಿ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಸರ್ಕಾರ ಮುಕ್ತ ಮನಸ್ಸಿನಿಂದ ಬಂದು ಜನರ ಮಾತನ್ನು ಆಲಿಸುತ್ತದೆ ಎಂಬ ಭರವಸೆ ಇದೆ. ಜುಲೈ 20ರಂದು ನಡೆದಿದ್ದ ಸಭೆಯಲ್ಲಿ ಸಿಜೆಪಿ ನಾಯಕರನ್ನು ಸಚಿವ ಜೆ.ಪಿ. ನಡ್ಡಾ ಅವರ ಮನೆಯಲ್ಲಿ ಬಂಧನದಲ್ಲಿಟ್ಟಂತೆ ನೋಡಿಕೊಳ್ಳಲಾಗಿತ್ತು. ಈ ಕಾರಣಕ್ಕಾಗಿ, ಮುಂದಿನ ಯಾವುದೇ ಮಾತುಕತೆ ಸಚಿವರ ಮನೆಯಲ್ಲಿ ಬೇಡ, ಸಾರ್ವಜನಿಕ ಸ್ಥಳದಲ್ಲೇ ನಡೆಯಬೇಕು ಎಂದಿದ್ದೆವು ಎಂದು ಮಾಹಿತಿ ನೀಡಿದ್ದಾರೆ.
