
ಪಾಕಿಸ್ತಾನದ ವಿರುದ್ಧ ಹೋರಾಡುತ್ತಿರುವ ಭಾರತೀಯ ಸೈನಿಕರಿಗಾಗಿ ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ
ಉಡುಪಿ: ಕಾಶ್ಮೀರದಲ್ಲಿನ ಘಟನೆಗೆ ಪ್ರತಿಕಾರವಾಗಿ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಭಾರತೀಯ ಸೈನಿಕರ ನೈತಿಕ ಸ್ಥೈರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರ ಸೂಚನೆಯಂತೆ ಶುಕ್ರವಾರ ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಜುಮ್ಮಾ ನಮಾಝಿನ ಬಳಿಕ ಉಡುಪಿ ಜಾಮೀಯ ಮಸೀದಿಯ ಇಮಾಮ್ ಮೌಲಾನ ಅಬ್ದುರ್ರಶೀದ್ ನದ್ವಿ, ಬ್ರಹ್ಮಗಿರಿ ನಾಯರ್ ಕೆರೆ ಹಾಶ್ಮಿ ಮಸೀದಿಯ ಇಮಾಮ್ ಉಬೇದ್ರುಹಮಾನ್ ನದ್ವಿ ಸೇರಿದಂತೆ ವಿವಿಧ ಮಸೀದಿಗಳ ಖತೀಬ್, ಇಮಾಮ್ಗಳು ದೇಶದ ಶಾಂತಿ ಸೌಹಾರ್ದತೆಗಾಗಿ ಮತ್ತು ಭಾರತೀಯ ಸೇನೆಯ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅದೇ ರೀತಿ ಕಾಪು, ಪಡುಬಿದ್ರೆ, ಕಾರ್ಕಳ, ಗಂಗೊಳ್ಳಿ, ಕೋಟ, ಕುಂದಾಪುರ ಮಸೀದಿಗಳಲ್ಲಿ ಇಂದು ಜುಮಾ ನಮಾಝ್ ಬಳಿಕ ಸೈನಿಕರಿಗಾಗಿ ವಿಶೇಷ ದುವಾ ಮಾಡಲಾಯಿತು.
ಉಡುಪಿಯಲ್ಲಿ ಜುಮಾ ನಮಾಜಿನ ಬಳಿಕ ಮಾತನಾಡಿದ ಮುಸ್ಲಿಂ ಮುಖಂಡ ಇಕ್ಬಾಲ್ ಮನ್ನಾ ಅವರು, ಪೆಹಲ್ಗಾಂ ದಾಳಿಯ ನಂತರ ನಾವು ಪಾಕಿಗಳಿಗೆ ತಕ್ಕ ಪಾಠ ಕಲಿಸಿದ್ದೇವೆ. ಪಾಕಿಸ್ಥಾನಕ್ಕೆ ಹೊಡೆಯಲು ಭಾರತಕ್ಕೆ ಅರ್ಧ ಗಂಟೆ ಸಾಕು. ಪದೇಪದೇ ಜಗಳಕ್ಕೆ ಬರುವ ಪಾಕ್ ಗೆ ತಕ್ಕ ಶಾಸ್ತಿಯಾಗಲಿದೆ. ಈ ಸಂದರ್ಭದಲ್ಲಿ ನಾವೆಲ್ಲ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ. ವಕ್ಫ್ ಇಲಾಖೆಯಿಂದಲೂ ನಮಗೆ ನಿರ್ದೇಶನ ಬಂದಿದೆ. ಅದಕ್ಕೂ ಮುನ್ನವೇ ನಾವು ಪ್ರಾರ್ಥನೆ ಮಾಡಲು ನಿರ್ಧರಿಸಿದ್ದೆವು. ದೇಶಕ್ಕಾಗಿ ದೇಶದ ಜನರ ಒಳಿತಿಗಾಗಿ ಮಸೀದಿಯಲ್ಲಿ ಪ್ರಾರ್ಥನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.