
ಕೊನೆಗೂ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡ ಆರ್ಸಿಬಿ; ಪಂಜಾಬ್ ವಿರುದ್ಧ RCB ರೋಚಕ ಜಯಭೇರಿ
ಅಹ್ಮದಾಬಾದ್: ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.
ನಿರೀಕ್ಷೆಯಂತೆಯೇ ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.
ಮಂಗಳವಾರ ಟಾಸ್ ಜಯಿಸಿದ ಪಂಜಾಬ್ ಕ್ರಿಕೆಟ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆರ್ಸಿಬಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ರಜತ್ ಪಾಟಿದಾರ್ ಬಳಗವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 190 ರನ್ ಗಳಿಸುವಲ್ಲಿ ಶಕ್ತವಾಯಿತು. ವೇಗದ ಬೌಲರ್ ಕೈಲ್ ಜಮೀಸನ್(3-48) ಹಾಗೂ ಅರ್ಷದೀಪ್ ಸಿಂಗ್(3-40) ತಲಾ 3 ವಿಕೆಟ್ಗಳನ್ನು ಉರುಳಿಸಿದರು.
ಪಂಜಾಬ್ ಕಿಂಗ್ಸ್ ಪಡೆಯನ್ನು 6 ರನ್ ಗಳಿಂದ ಬಗ್ಗುಬಡಿದ ರಜತ್ ಪಾಟೀದಾರ್ ಬಳಗ ಈ ಬಾರಿ ಕಪ್ ನಮ್ದು ಎಂದು ಹೆಮ್ಮೆಯಿಂದ ಬೀಗಿದೆ. ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೋಮಾಂಚಕ ಪಂದ್ಯದಲ್ಲಿ ಗೆಲ್ಲಲು 192 ರನ್ ಗಳ ಸವಾಲಿನ ಗುರಿ ಪಡೆದ ಶ್ರೇಯಸ್ ಅಯ್ಯರ್ ಪಡೆ ನಿಗದಿತ ಓವರ್ ಗಳು ಮುಗಿದಾಗ 7 ವಿಕೆಟ್ ಕಳೆದುಕೊಂಡು 184 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಪಂಜಾಬ್ ಕಿಂಗ್ಸ್ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್ ಗೆ 5 ಓವರ್ ಗಳಲ್ಲಿ 43 ರನ್ ಜೊತೆಯಾಟವಾಡಿದರು. ಈ ಹಂತದಲ್ಲಿ 19 ಎಸೆತದಲ್ಲಿ 24 ರನ್ ಗಳಿಸಿದ್ದ ಪ್ರಿಯಾಂಶ್ ಆರ್ಯ ಅವರನ್ನು ಜೋಶ್ ಹೇಜಲ್ ವುಡ್ ಅವರು ಸಾಲ್ಟ್ ಅವರಿಗೆ ಕ್ಯಾಚ್ ಕೊಡಿಸಿದರು. ಆದರೂ ಪಂಜಾಬ್ ಆರ್ಭಟ ಮಾತ್ರ ಕಡಿಮೆಯಾಗಿರಲಿಲ್ಲ.