ಅರಣ್ಯ ಸಚಿವ ಈಶ್ವರ ಖಂಡ್ರೆಯನ್ನು ಭೇಟಿಯಾದ ಕೇರಳದ ಅರಣ್ಯ ಸಚಿವ ಸಶೀಂದ್ರನ್; ಜೈವಿಕ ಉದ್ಯಾನದ ತಾಂತ್ರಿಕ ನೈಪುಣ್ಯತೆ, ಜ್ಞಾನ ವಿನಿಮಯಕ್ಕೆಸಮ್ಮತಿ ಸೂಚಿಸಿದ ಖಂಡ್ರೆ

ಅರಣ್ಯ ಸಚಿವ ಈಶ್ವರ ಖಂಡ್ರೆಯನ್ನು ಭೇಟಿಯಾದ ಕೇರಳದ ಅರಣ್ಯ ಸಚಿವ ಸಶೀಂದ್ರನ್; ಜೈವಿಕ ಉದ್ಯಾನದ ತಾಂತ್ರಿಕ ನೈಪುಣ್ಯತೆ, ಜ್ಞಾನ ವಿನಿಮಯಕ್ಕೆಸಮ್ಮತಿ ಸೂಚಿಸಿದ ಖಂಡ್ರೆ

ಕೇರಳದ ತ್ರಿಶೂರ್ ಜಿಲ್ಲೆಯ ಪುಥೂರಿನಲ್ಲಿ ಕೇರಳ ಸರ್ಕಾರ ನಿರ್ಮಿಸುತ್ತಿರುವ ನೂತನ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಮತ್ತು ಪಕ್ಷಿಗಳ ನಿರ್ವಹಣೆಗೆ ಅಗತ್ಯವಾದ ತಾಂತ್ರಿಕ ನೈಪುಣ್ಯತೆ ಮತ್ತು ಜ್ಞಾನ ವಿನಿಮಯಕ್ಕೆ ಕರ್ನಾಟಕ ಅರಣ್ಯ, ಜೀವಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಸಮ್ಮತಿ ನೀಡಿದ್ದಾರೆ.





ಈ ಕುರಿತು ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾದ ಕೇರಳದ ಅರಣ್ಯ ಸಚಿವ ಎ.ಕೆ. ಸಶೀಂದ್ರನ್ ಅವರು, ಜೈವಿಕ ಉದ್ಯಾನದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯವಿರುವ ತಾಂತ್ರಿಕ ಜ್ಞಾನ ಹಂಚಿಕೊಳ್ಳುವಂತೆ ಮನವಿ ಮಾಡಿದರು. ಈ ಮನವಿಗೆ ಸಚಿವ ಶ್ರೀ ಖಂಡ್ರೆ ಅವರು ಸ್ಪಂದಿಸಿ, ಅಂತರ್ ರಾಜ್ಯ ಸಹಕಾರಕ್ಕೆ ಕರ್ನಾಟಕ ಸರ್ಕಾರ ಸಿದ್ಧವಿರುವುದಾಗಿ ತಿಳಿಸಿದರು.

136.8 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಜೈವಿಕ ಉದ್ಯಾನವನ್ನು ಆಸ್ಟ್ರೇಲಿಯಾದ ವಿಶ್ವ ಖ್ಯಾತ ಮೃಗಾಲಯ ವಿನ್ಯಾಸಕಾರ ಜಾನ್ ಸಿಯೋ ಅವರಿಂದ ವಿನ್ಯಾಸಗೊಳಿಸಲಾಗಿದ್ದು, ಬರುವ ಆಗಸ್ಟ್ ಅಂತ್ಯಕ್ಕೆ ಇದು ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ. ಇದಕ್ಕಾಗಿ ಕರ್ನಾಟಕದ ಮೃಗಾಲಯಗಳಲ್ಲಿ ಹೆಚ್ಚುವರಿ ಇರುವ ಕೆಲವೊಂದು ವನ್ಯಜೀವಿಗಳನ್ನು ಕೇರಳದ ಮೃಗಾಲಯಕ್ಕೆ ನೀಡುವಂತೆ ಕೋರಿಕೆಯೂ ಮುಂದಿಡಲಾಯಿತು.

ಈ ಸಂದರ್ಶನ ವೇಳೆ ಡೀಮ್ಡ್ ಅರಣ್ಯ ಕುರಿತು ಕೇರಳ ರಾಜ್ಯದಲ್ಲಿ ಕೈಗೊಂಡಿರುವ ಕ್ರಮಗಳು ಮತ್ತು ಕಸ್ತೂರಿ ರಂಗನ್ ವರದಿ ಕುರಿತಂತೆ ನಿರ್ಣಯಗಳ ಬಗ್ಗೆ ಸಮಾಲೋಚನೆ ನಡೆಯಿತು.

ಸಭೆಯಲ್ಲಿ ಕೇರಳದ ಮುಖ್ಯ ವನ್ಯಜೀವಿ ಪರಿಪಾಲಕ ಶ್ರೀ ಪ್ರಮೋದ್ ಜಿ. ಕೃಷ್ಣನ್, ಕರ್ನಾಟಕ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಮೀನಾಕ್ಷಿ ನೇಗಿ, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಸುಭಾಷ್ ಮಲ್ಕಡೆ, ಶ್ರೀ ಸುನೀಲ್ ಪನ್ವಾರ್, ಶ್ರೀ ಸೂರ್ಯ ಸೇನ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article