ಹಿಂದೂ ಕಾರ್ಯಕರ್ತರನ್ನು ಹಿಂಸಿಸುತ್ತಿರುವ ಪೊಲೀಸರ ಮೇಲೆ ಕ್ರಮಕೈಗೊಳ್ಳಿ:  ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಮನವಿ

ಹಿಂದೂ ಕಾರ್ಯಕರ್ತರನ್ನು ಹಿಂಸಿಸುತ್ತಿರುವ ಪೊಲೀಸರ ಮೇಲೆ ಕ್ರಮಕೈಗೊಳ್ಳಿ: ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಮನವಿ

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳು ನಾಗರಿಕ ಸಮಾಜದಲ್ಲಿ ಭೀತಿಯ ವಾತಾವರಣವನ್ನು ಉಂಟು ಮಾಡಿದ್ದು, ನಾಗರಿಕರ ಖಾಸಗಿ ಜೀವನ ಮತ್ತು ವ್ಯಕ್ತಿತ್ವದ ಗೌರವವನ್ನು ಘನತೆಯನ್ನು ಹಾಳು ಮಾಡುತ್ತಿದೆ. ಪೊಲೀಸರು ಕಳೆದ ಒಂದು ವಾರದಿಂದ ಕೋಮುಸೌಹಾರ್ದವನ್ನು ಕಾಪಾಡುವ ನೆಪದಲ್ಲಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಹಿಂದೂ ಕಾರ್ಯಕರ್ತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯ ಮೇರೆಗೆ ಹಿಂದೂ ಕಾರ್ಯಕರ್ತರಿಗೆ ಪೊಲೀಸ್ ವಿಚಾರಣೆಯ ನೆಪದಲ್ಲಿ ಸ್ಥಳಿಯ ಪೊಲೀಸ್ ಠಾಣೆಯಿಂದ ಮಧ್ಯರಾತ್ರಿ ದೂರವಾಣಿ ಕರೆ ಮಾಡಿ, ನೋಟಿಸು ನೀಡದೆ ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆಯುವುದು, ಮಧ್ಯರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರು ಹೋಗಿ ವಿಚಾರಣೆ ಮಾಡುವುದು, ಬಲವಂತವಾಗಿ ರಾತ್ರಿ ಅವರ ಪೋಟೊ ತೆಗೆಯುವುದು, ಅವರ ಮನೆಯ ಜಿಪಿಎಸ್ ಲೊಕೇಶನ್ ಸಂಗ್ರಹ ಮಾಡುವುದು. ಕಳೆದ ಅನೇಕ ದಶಕಗಳಿಂದ ಯಾವುದೇ ರೀತಿಯಲ್ಲಿ ಸಾಮಾಜಿಕ  ಚಟುವಟಿಕೆಯಲ್ಲಿ ಭಾಗಿಯಾಗದ ಕೂಲಿ ಕಾರ್ಮಿಕರು, ವಯಸ್ಕರನ್ನು ಬಿಡದೇ ಮಧ್ಯರಾತ್ರಿ ಪೋನ್ ಮಾಡಿ, ಮನೆಗೆ ಹೋಗಿ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಸಹ ಅವರ ಮೇಲೆ ಪ್ರಕರಣವನ್ನು ದಾಖಲು ಮಾಡಿ ಬಂಧನ ಮಾಡಿ, ಅವರಿಗೆ ಕಿರುಕುಳ ನೀಡಿ, ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಅವರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತದೆ. ಈ ರೀತಿಯಲ್ಲಿ ಪೋಲಿಸರು ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಿಂದೂ ಕಾರ್ಯಕರ್ತರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ಭಾರತ ಸಂವಿಧಾನದ ಕಲಂ 14, 19 ಮತ್ತು 21 ರ ಉಲ್ಲಂಘನೆಯಾಗಿದೆ. ಅದಲ್ಲದೇ ಭಾರತೀಯ ನ್ಯಾಯ ಸಂಹಿತೆ ಕಲಂ 105, 107, 182, 352, 128 ಪ್ರಕಾರ ಇದು ಗಂಭೀರ ಅಪರಾಧವಾಗಿದೆ. ಇದು ಭಾರತದ ಸಂವಿಧಾನವು ನೀಡಿದ ನಾಗರಿಕರ ಖಾಸಗಿ ಹಕ್ಕು ಮತ್ತು ಜೀವನದ ಹಕ್ಕನ್ನು ಕಸಿದು, ನಮ್ಮಲ್ಲಿ ಅಸುರಕ್ಷಿತ ಭಾವನೆ ನಿರ್ಮಾಣ ಮಾಡುವ ಪ್ರಯತ್ನವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಬೇಡಿಕೆಗಳು:

ಸರಕಾರವು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮಾನವ ಹಕ್ಕಗಳು ಉಲ್ಲಂಘನೆ ಮಾಡಿದ ವಿಷಯದಲ್ಲಿ ಉನ್ನತ ಮಟ್ಟದ ತನಿಖೆಯನ್ನು ಮಾಡಬೇಕು.

ದಕ್ಷಿಣ ಕನ್ನಡ ಜಿಲ್ಲೆಯ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ನಡೆದುಕೊಳ್ಳುವಂತೆ ಆದೇಶವನ್ನು ನೀಡಬೇಕು.

ಪೊಲೀಸರಿಂದ ಕಿರುಕುಳಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಪರಿಹಾರವನ್ನು ನೀಡಬೇಕು ಮತ್ತು ಸಂಬಂಧಿಸಿದವರಿಂದ ಲಿಖಿತ ಕ್ಷಮಾಪಣೆ ಪಡೆಯಬೇಕು.

ಪೊಲೀಸರು ಈ ಪ್ರಕರಣದಲ್ಲಿ ಸ್ವಯಂಪ್ರೇರಿತರಾಗಿ ಗಮನ ಹರಿಸಿ, ಸೂಕ್ತ ತನಿಖೆ, ಕ್ರಮ ಜರುಗಿಸಿ  ಪ್ರಕರಣದ ಮೇಲೆ ನಿಗಾ ಇಡಬೇಕು ಮತ್ತು ಮಾನಸಿಕ ಕಿರುಕುಳ ನೀಡುವ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡುವ ಪೂಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಪೀಡಿತರಿಗೆ ನ್ಯಾಯ ಒದಗಿಸಿಕೊಡಬೇಕು.

ಜಿಲ್ಲೆಯಲ್ಲಿ ಹಿಂದೂ ನಾಯಕರಿಗೆ ಬಂದಿರುವ ಜೀವ ಬೆದರಿಕೆಗಳ ಬಗ್ಗೆ ತಕ್ಷಣ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಹಿಂದೂ ನಾಯಕರಿಗೆ ರಕ್ಷಣೆ ನೀಡಬೇಕು.

ಅಬ್ದುಲ್ ರೆಹಮಾನ್ ಶವಯಾತ್ರೆ ವೇಳೆ ನಡೆದ ಬಲವಂತ, ಮಾಧ್ಯಮದ ಮೇಲಿನ ಹಲ್ಲೆ, ಕಲ್ಲು ತೂರಾಟದ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

ಪಿಎಫ್‌ಐ ಸಂಘಟನೆಯ ಸದಸ್ಯರು ಅನ್ಯ ಸಂಘಟನೆಯ ಮೂಲಕ ಸಕ್ರೀಯವಾಗಿದ್ದು, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಅವರ ಕೈವಾಡ ಇರುವ ಶಂಕೆಯಿದ್ದು, ಸುಹಾಸ್ ಶೆಟ್ಟಿ ಪ್ರಕರಣವನ್ನು ಓರ್ವ ಐಪಿಎಸ್ ಅಧಿಕಾರಿ ನೆೇತೃತ್ವದಲ್ಲಿ ತನಿಖೆಯನ್ನು ಮಾಡಿ, ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದ, ಕುಮ್ಮಕ್ಕು ನೀಡಿದ, ಸಹಕರಿಸಿದ ಎಲ್ಲರ ಬಂಧನ ಆಗಬೇಕು ಮತ್ತು ಪಿಎಪ್‌ಐ ಮೇಲೆ ನಿಷೇಧವನ್ನು ತೀವ್ರವಾಗಿ ಜಾರಿಗೆ ತಂದು, ಸಕ್ರಿಯ ಸದಸ್ಯರ ಮೇಲೆ ಕಠಿಣ ಕ್ರಮ ಜರುಗಿಸಬೇಕು.

ಕೋಮುಹಿಂಸೆಯನ್ನು ಪ್ರಚೋದನೆ ಮಾಡುವ ಎಸ್‌ಡಿಪಿಐ ಮುಖಂಡರಾದ ರಿಯಾಜ್ ಫರಂಗಿಪೇಟೆ, ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಬು, ಪ್ರಧಾನ ಕಾರ್ಯದರ್ಶಿ ಜಮಾಲ್ ಜೊಕಟ್ಟೆ ಮುಂತಾದವರ ಮೇಲೆ ದ್ವೇಷ ಭಾಷಣದ ಪ್ರಕರಣವನ್ನು ದಾಖಲಿಸಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಗಿದೆ.

ಮನವಿ ನೀಡುವ ವೇಳೆ ಡಾ. ಸುದರ್ಶನ(ಭಾರತೀಯ,ಸಂಸ್ಥಾಪಕರು,ಅಭಿರಾಮ ಧಾಮ,ಉಡುಪಿ), ಉಮೇಶ್ ಶೆಟ್ಟಿ(ಸಹ ಸಂಚಾಲಕರು,ಹಿಂದೂ ಜಾಗರಣ ವೇದಿಕೆ), ಪ್ರಮೋದ್ ಉಚ್ಚಿಲ(ಹಿಂದೂ ಮಹಾಸಭಾ), ಜಯರಾಂ ಅಂಬೇಕಲ್ಲೂ(ಶ್ರೀರಾಮ ಸೇನೆ, ಕಾರ್ಯ ಅಧ್ಯಕ್ಷರು, ಮಂಗಳೂರು ವಿಭಾಗ), ಚಂದ್ರ ಮೊಗವೀರ(ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ,ದಕ್ಷಿಣ ಕರ್ನಾಟಕ), ಗುರುಪ್ರಸಾದ್ ಶೆಣೈ(ಸಾಮಾಜಿಕ ಕಾರ್ಯಕರ್ತ), ರಾಘವೇಂದ್ರ ಆಚಾರ್ಯ(ಹಿಂದೂ ಮುಖಂಡರು), ಸತ್ಯೇಂದ್ರ ಭಟ್, ನಾಗರಾಜ್, ಸಂತೋಷ್ ಮೂಡುಬೆಳ್ಳೆ, ಜ್ಞಾನೇಶ್ ಪಲಿಮಾರು ಮುಂತಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article