ಹನಿಮೂನ್ ವೇಳೆ ಪತಿಯ ಹತ್ಯೆ: ತನ್ನ ಪಾತ್ರವನ್ನು ಒಪ್ಪಿಕೊಂಡ ಪತ್ನಿ ಸೋನಮ್ ರಘುವಂಶಿ!

ಹನಿಮೂನ್ ವೇಳೆ ಪತಿಯ ಹತ್ಯೆ: ತನ್ನ ಪಾತ್ರವನ್ನು ಒಪ್ಪಿಕೊಂಡ ಪತ್ನಿ ಸೋನಮ್ ರಘುವಂಶಿ!

ಶಿಲ್ಲಾಂಗ್: ಮೇಘಾಲಯಕ್ಕೆ ಹನಿಮೂನ್ ಹೋಗಿದ್ದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ಅವರ ಪತ್ನಿ ಸೋನಮ್ ರಘುವಂಶಿ ಅಪರಾಧದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ವಿಚಾರಣೆಯ ಸಮಯದಲ್ಲಿ ಸೋನಮ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು NDTV ಗೆ ತಿಳಿಸಿವೆ. ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸದ ಹೊರತು ನ್ಯಾಯಾಲಯದಲ್ಲಿ ಅಂಗೀಕರಿಸಲಾಗುವುದಿಲ್ಲವಾದರೂ, ಆಕೆಯ ಹೇಳಿಕೆ ತನಿಖೆಯಲ್ಲಿ ಮಹತ್ವದ ಮುನ್ನಡೆಯಾಗಿದೆ.

ಮೇ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಜ ರಘುವಂಶಿ ಮತ್ತು ಸೋನಮ್ ದಂಪತಿ ಮೇ 20 ರಂದು ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದರು. ಅವರು ಮೇ 22 ರಂದು ಬಾಡಿಗೆ ಸ್ಕೂಟರ್‌ನಲ್ಲಿ ಮೌಲಾಖಿಯಾತ್ ಗ್ರಾಮಕ್ಕೆ ಬಂದಿದ್ದರು.

ಮೇ 23 ರಂದು ದಂಪತಿಗಳು ನಾಪತ್ತೆಯಾಗಿದ್ದು, ಜೂನ್ 2 ರಂದು ರಾಜ ರಘುವಂಶಿ ಅವರ ಶವ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ನಂತರ ಜೂನ್ 8 ರಂದು ಉತ್ತರ ಪ್ರದೇಶದ ಘಾಜಿಪುರದಲ್ಲಿ ಪತ್ನಿ ಸೋನಮ್‌ರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಯಿತು. ನಂತರ ಇತರ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಮ್ ತನ್ನ ಗೆಳೆಯ, ಪ್ರಕರಣದ ಮತ್ತೊಬ್ಬ ಆರೋಪಿ ರಾಜ್ ಕುಶ್ವಾಹ ಮುಂದೆ ವಿಚಾರಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ.

ಮೇಘಾಲಯ ಪೊಲೀಸರ ಪ್ರಕಾರ, ಸೋನಮ್ 21 ವರ್ಷದ ರಾಜ್ ಕುಶ್ವಾಹ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಮತ್ತು ಅವರ ಪತಿಯನ್ನು ಕೊಲ್ಲಲು ಪ್ರಿಯತಮನೊಂದಿಗೆ ಸಂಚು ರೂಪಿಸಿದ್ದರು. ಹೀಗಾಗಿ ಇಬ್ಬರನ್ನೂ ಬಂಧಿಸಲಾಗಿದೆ.

ಇಂದೋರ್ ಅಪರಾಧ ವಿಭಾಗದ ಪ್ರಕಾರ, ಕೊಲೆ ಆರೋಪಿಗಳಾಗಿರುವ ಇತರ ನಾಲ್ವರು ಸಹ ತಪ್ಪೊಪ್ಪಿಕೊಂಡಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತ ಪೂನಂ ಚಂದ್ ಯಾದವ್ ಅವರು ಆರೋಪಿಗಳಲ್ಲಿ ಒಬ್ಬರಾದ ವಿಶಾಲ್ ಅಲಿಯಾಸ್ ವಿಕ್ಕಿ ಠಾಕೂರ್, ಮೊದಲು ರಾಜಾ ರಘುವಂಶಿ ಮೇಲೆ ಮಾರಕ ಹಲ್ಲೆ ನಡೆಸಿದ್ದಾರೆ. ನಂತರ ಇತರರು ವಿಕ್ಕಿಗೆ ಸಾಥ್ ನೀಡಿ ಕೊಲೆ ಮಾಡಿದ್ದಾರೆ. ಬಳಿಕ ರಾಜಾ ಅವರ ದೇಹವನ್ನು ಕಂದಕಕ್ಕೆ ಎಸೆದಿದ್ದಾರೆ.

ಪೊಲೀಸರು ರಾಜ್ ಕುಶ್ವಾಹರೊಂದಿಗೆ ಸೋನಮ್ ಇರುವ ಫೋಟೋವನ್ನು ಸಹ ವಶಪಡಿಸಿಕೊಂಡಿದ್ದಾರೆ. ಇದನ್ನು ಅಪರಾಧದಲ್ಲಿ ಅವರ ಸಂಬಂಧ ಮತ್ತು ಪಾತ್ರದ ಬಗ್ಗೆ ಮತ್ತಷ್ಟು ಪುರಾವೆಯಾಗಿ ಪರಿಗಣಿಸಲಾಗುತ್ತಿದೆ.

Ads on article

Advertise in articles 1

advertising articles 2

Advertise under the article