ಬೆಂಗಳೂರು: ಜೆಡಿ(ಎಸ್) ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನಿರಾಕರಿಸಿದ ಬಿಜೆಪಿಯನ್ನು ಆಡಳಿತಾರೂಢ ಕಾಂಗ್ರೆಸ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮಾಜಿ ಪ್ರಧಾನಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ನಿರಾಕರಿಸುವ ಮೂಲಕ ಬಿಜೆಪಿ ಕನ್ನಡಿಗರನ್ನು ಅವಮಾನಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕರ್ನಾಟಕದಿಂದ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಗೆಲ್ಲಬಹುದಾದ ಸ್ಥಾನಕ್ಕೆ ಬಿಜೆಪಿ ರಾಜ್ಯಸಭೆ ಅಭ್ಯರ್ಥಿಯಾಗಿ ಪ್ರೊ. ಎಂ. ನಾಗರಾಜ ಅವರನ್ನು ಭಾನುವಾರ ತಡರಾತ್ರಿ ಘೋಷಿಸಿದೆ. ವಿಧಾನಸಭೆಯಲ್ಲಿನ ಪ್ರಸ್ತುತ ಬಲದ ಆಧಾರದ ಮೇಲೆ, ಜೂನ್ 18 ರಂದು ಚುನಾವಣೆ ನಡೆಯಲಿರುವ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಒಂದನ್ನು ಗೆಲ್ಲಬಹುದಾಗಿದೆ.
ದೇವೇಗೌಡ ಅವರು ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿರುವುದರಿಂದ ಈ ಚುನಾವಣೆ ನಡೆಯುತ್ತಿದೆ.
ಬಿಜೆಪಿಯ ಮಿತ್ರಪಕ್ಷವಾದ ಜೆಡಿ(ಎಸ್) ತನ್ನ ವರಿಷ್ಠ ದೇವೇಗೌಡ ಅವರನ್ನು ರಾಜ್ಯಸಭೆಗೆ ಮತ್ತೆ ನಾಮನಿರ್ದೇಶನ ಮಾಡುತ್ತದೆ ಎಂದು ನಿರೀಕ್ಷಿಸುತ್ತಿತ್ತು ಎಂದು ವರದಿಯಾಗಿದೆ.
ದೇವೇಗೌಡರಿಗೆ ರಾಜ್ಯಸಭಾ ಸ್ಥಾನವನ್ನು ಬಿಜೆಪಿ ನಿರಾಕರಿಸಿದ ರೀತಿ ಅವರಿಗೆ ಅಥವಾ ಪ್ರಾದೇಶಿಕ ಪಕ್ಷಕ್ಕೆ ಮಾತ್ರವಲ್ಲದೆ ಕರ್ನಾಟಕದ ಜನರಿಗೆ ಮಾಡಿದ ಅವಮಾನವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರು ಹೇಳಿದ್ದಾರೆ.
"ಬಿಜೆಪಿ ಮತ್ತು ಎನ್ಡಿಎ ಕರ್ನಾಟಕದ ಜನರನ್ನು ಅವಮಾನಿಸಿವೆ. ಸಂಸತ್ತಿನಲ್ಲಿ ವಿವಿಧ ಮಸೂದೆಗಳನ್ನು ಅಂಗೀಕರಿಸಲು ಜೆಡಿ(ಎಸ್) ಮತ್ತು ದೇವೇಗೌಡರ ಬೆಂಬಲ ಪಡೆದ ನಂತರ ಅವರಿಗೆ ಈ ರೀತಿ ದ್ರೋಹ ಮಾಡುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಜನರು ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಮತ್ತು ಜೆಡಿ(ಎಸ್) ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬುದು ಕಾಂಗ್ರೆಸ್ಗೆ ಸಂಬಂಧವಿಲ್ಲದ ವಿಚಾರ. ಅದು ಅವರ ಪಕ್ಷದ ನೀತಿಯಾಗಿದೆ ಎಂದು ಹೇಳಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, "ಆದರೆ, ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು - ಎರಡೂ ಪಕ್ಷಗಳ ನಡುವಿನ ಮೈತ್ರಿ ಈ ಪ್ರಮುಖ ಸ್ಥಾನದಲ್ಲಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.
ಜೂನ್ 25 ರಂದು ಈರಣ್ಣ ಕಡಾಡಿ ಮತ್ತು ನಾರಾಯಣ ಕೊರಗಪ್ಪ(ಇಬ್ಬರೂ ಬಿಜೆಪಿಯಿಂದ), ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡರ ಅವಧಿ ಕೊನೆಗೊಳ್ಳುತ್ತಿದ್ದು, ಈ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ.
ವಿಧಾನಸಭೆಯಲ್ಲಿನ ತನ್ನ ಬಲದ ಆಧಾರದ ಮೇಲೆ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲಬಹುದಾಗಿದ್ದು, ಬಿಜೆಪಿ ಒಂದು ಸ್ಥಾನ ಗೆಲ್ಲಲಿದೆ.
