ಪ್ರತಿಭಟನೆ ನಡೆಸುವ ಜೆನ್‌ ಝಿಗಳು ದೇಶದ್ರೋಹಿಗಳಲ್ಲ; ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ: ಮೋಹನ್ ಭಾಗವತ್‌

ಮುಂಬೈ: ಪ್ರತಿಭಟನೆ ನಡೆಸುವ ಜೆನ್‌ ಝಿಗಳನ್ನು (Gen Z) ದೇಶದ್ರೋಹಿಗಳು ಎಂದು ಕರೆಯಲು ಸಾಧ್ಯವಿಲ್ಲ, ಅವರು ನಮ್ಮದೇ ಮುಂದಿನ ಪೀಳಿಗೆ ಎಂದು ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ.

ಮುಂಬೈನಲ್ಲಿ Gen Z ಮತ್ತು Gen Alpha ಪೀಳಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, Gen Z ಯುವಕರು ಯಾವುದಾದರೂ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡರೆ, ಅವರು ದೇಶದ್ರೋಹಿಗಳಲ್ಲ(Anti Nationals) ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅವರು ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ ಎಂದು ತಿಳಿಸಿದರು.

ಸಂವಾದ ನಡೆಯಬೇಕಾದರೆ ಪರಸ್ಪರ ಗೌರವ ಮತ್ತು ಅಪ್ಯಾಯತೆಯ ಭಾವನೆ ಅಗತ್ಯ. ನಾವಿಬ್ಬರೂ ಪರಸ್ಪರ ಗುರುತಿಸಿ ಗೌರವಿಸಿದಾಗ ಮಾತ್ರ ಅರ್ಥಪೂರ್ಣ ಸಂವಾದ ಸಾಧ್ಯ. ಆಗ ಮಾತ್ರ ಅವರ ಕಳವಳಗಳು ನಮಗೆ ಮತ್ತು ನಮ್ಮ ದೃಷ್ಟಿಕೋನ ಅವರಿಗೆ ಅರ್ಥವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಡೆಯಬೇಕಾದದ್ದು ಇದೇ ರೀತಿ ಎಂದರು.

ಇಂದಿನ ಯುವಪೀಳಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈಗಿನ ಯುವಜನತೆ ಹಾಲಿ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಪೀಳಿಗೆ ದೇಶದ ಬಗ್ಗೆ ಪ್ರಾಮಾಣಿಕತೆ, ದೇಶಭಕ್ತಿಯ ಭಾವನೆ ಹಾಗೂ ಸೇವಾ ಮನೋಭಾವವನ್ನು ಹೊಂದಿರಬೇಕು ಎಂದು ಹೇಳಿದರು.

ಇತ್ತೀಚಿನ ವಿದ್ಯಾರ್ಥಿ ಪ್ರತಿಭಟನೆಗಳ ಕುರಿತು ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯೂ ಸಹ ಸರ್ವಸಮ್ಮತಿಯನ್ನು ರೂಪಿಸುವ ಒಂದು ಮಾರ್ಗವಾಗಿದೆ. ಚರ್ಚೆ ಮತ್ತು ಸಂವಾದದ ಮೂಲಕ ಒಮ್ಮತ ಮೂಡುತ್ತದೆ. ಯಾವುದೇ ಕಾರಣಕ್ಕೆ ಸಮಸ್ಯೆಗಳಿಗೆ ಸ್ಪಂದನೆ ಸಿಗದಿದ್ದಾಗ ಆಕ್ರೋಶ ಪ್ರತಿಭಟನೆಯಾಗಿ ಹೊರಹೊಮ್ಮುತ್ತದೆ. ಆದರೆ ಈ ಪ್ರತಿಭಟನೆಗಳು ಒಮ್ಮತ ಮೂಡಿಸುವುದಕ್ಕಿರಬೇಕೇ ಹೊರತು ವಿಭಜನೆ ಸೃಷ್ಟಿಸುವುದಕ್ಕಲ್ಲ ಎಂದರು. 

ದೇಶದ ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ Gen Z ಎತ್ತಿರುವ ಕುಂದುಕೊರತೆಗಳು ಸಮಂಜಸವಾಗಿವೆ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಅವು ಸರಿಯಾಗಿ ಆಗದಿರುವುದರಿಂದಲೇ ಈ ಧ್ವನಿ ಎದ್ದಿದೆ. ಆದ್ದರಿಂದ ಈ ಕುರಿತು ಸಂವಾದ ನಡೆಯಬೇಕು ಎಂದು ಪ್ರತಿಪಾದಿಸಿದರು.

ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಭಾಗವತ್, ನಮ್ಮ ಕಾಲದಲ್ಲಿ ಹಿರಿಯರು ಹೇಳಿದ್ದನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವ ಅಭ್ಯಾಸ ನಮಗಿತ್ತು, ನಾವು ಅವರನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ಇಂದಿನ Gen Z ಮತ್ತು Gen Alpha ಪ್ರಶ್ನಿಸುತ್ತಾರೆ, ಅವರಿಗೆ ತಾರ್ಕಿಕ ಉತ್ತರ ಮತ್ತು ಪ್ರೀತಿಯ ಸಂವಾದ ಬೇಕಿದೆ. ನಮ್ಮಲ್ಲಿ ಶಾಸ್ತ್ರಾರ್ಥ (ಶಾಸ್ತ್ರಗಳ ಆಧಾರದ ಮೇಲೆ ನಡೆಸುವ ವೈಚಾರಿಕ ಚರ್ಚೆ- ಪ್ರಾಚೀನ ಭಾರತದಲ್ಲಿ ವಿದ್ವಾಂಸರು, ಪಂಡಿತರು ಮತ್ತು ಋಷಿಗಳು ಒಂದೆಡೆ ಸೇರಿ ಧರ್ಮ, ತತ್ವಜ್ಞಾನ ಮತ್ತು ಅಧ್ಯಾತ್ಮದ ವಿಷಯಗಳ ಕುರಿತು ಜ್ಞಾನಯುಕ್ತವಾದ ವಾದಗಳನ್ನು ನಡೆಸುತ್ತಿದ್ದರು. ಇದನ್ನು ‘ಶಾಸ್ತ್ರಾರ್ಥ ಸಭೆ’ ಎನ್ನಲಾಗುತ್ತಿತ್ತು) ಎನ್ನುವ ಪರಿಕಲ್ಪನೆ ಇದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ದೃಷ್ಟಿಕೋನ ಇರುತ್ತದೆ. ವಿವಿಧ ಅಭಿಪ್ರಾಯಗಳು ಸೇರಿ ಅಂತಿಮವಾಗಿ ಸತ್ಯದ ಸಮಗ್ರ ನೋಟ ಸಿಗುತ್ತದೆ ಎಂದರು. 

ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ಅವಕಾಶವಿದೆ ಎಂದು ಹೇಳಿದ ಅವರು, Gen Z ಪ್ರತಿಭಟಿಸಲೇಬಾರದು ಎಂದು ನಾನು ಹೇಳುವುದಿಲ್ಲ, ಆದರೆ ಪ್ರಜಾಪ್ರಭುತ್ವದಲ್ಲಿ ಅದಕ್ಕೊಂದು ರೀತಿ-ರಿವಾಜುಗಳಿವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾಷಣಗಳು ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡುತ್ತವೆ. ಯುವಪೀಳಿಗೆ ಧ್ವನಿ ಎತ್ತುತ್ತಿರುವುದು ಕೇವಲ ವಿರೋಧಿಸುವುದಕ್ಕಲ್ಲ, ತಮ್ಮ ಸಮಸ್ಯೆಗಳ ಸರಿಪಡಿಸುವಿಕೆಗಾಗಿ ಎಂಬುದನ್ನು ನಾವೂ ಅರ್ಥಮಾಡಿಕೊಳ್ಳಬೇಕು. ಪ್ರತಿಭಟನೆ ವ್ಯಕ್ತಿಗತ ವಿರೋಧವಾಗಿರಬಾರದು, ವ್ಯವಸ್ಥೆಯ ಸುಧಾರಣೆಗಾಗಿರಬೇಕು ಎಂದು ಅಭಿಪ್ರಾಯಪಟ್ಟರು.